ʼಕಠ್ಮಂಡು ಹೋಟೆಲ್ ಬೆಂಕಿ: ಭಾರತೀಯ ಮಹಿಳೆ ಪಾರಾಗುವ ವೇಳೆ ಸಾವುʼ

ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆತೀವ್ರಗೊಂಡು, ಹಿಂಸಾಚಾರದ ರೂಪ ತಾಳಿತ್ತು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಲವು ಹೋಟೆಲ್ಗಳು, ಮನೆಗಳಿಗೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಆ ಹೋಟೆಲ್ನಲ್ಲಿ ಭಾರತದ ದಂಪತಿ ಕೂಡ ಇದ್ದರು. ಬೆಂಕಿಯಿಂದ ಬಚಾವಾಗಲು ಹೋಗಿ ಮಹಿಳೆ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಮೃತ ಮಹಿಳೆಯನ್ನು ರಾಜೇಶ್ ಗೋಲಾ (57) ಎಂದು ಗುರುತಿಸಲಾಗಿದೆ.

ಪಶುಪತಿ ನಾಥ ದೇವಾಲಯಕ್ಕೆ ಭೇಟಿ ನೀಡಲು ನೇಪಾಳಕ್ಕೆ ಕೆಲಸಕ್ಕೆ ರಜೆ ಹಾಕಿ ತೆರಳಿದ್ದ ಗಾಜಿಯಾಬಾದ್ನ ದಂಪತಿ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದರು. ರಾಮ್ವೀರ್ ಸಿಂಗ್ ಗೋಲಾ ಮತ್ತು ಅವರ ಪತ್ನಿ ರಾಜೇಶ್ ಸೆಪ್ಟೆಂಬರ್ 7 ರಂದು ಕಠ್ಮಂಡು ತಲುಪಿದ್ದರು. ಸೆಪ್ಟೆಂಬರ್ 9 ರ ರಾತ್ರಿ, ಗಲಭೆಕೋರರು ಅವರು ತಂಗಿದ್ದ ಹೋಟೆಲ್ಗೆ ಬೆಂಕಿ ಹಚ್ಚಿದ್ದರು.
ಹಿಂಸಾಚಾರ ಭುಗಿಲೆದ್ದ ತಕ್ಷಣ, ಹೋಟೆಲ್ ಸಿಬ್ಬಂದಿ ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದರು. ನನ್ನ ಅಪ್ಪ, ಅಮ್ಮ ಮೂರನೇ ಮಹಡಿಯಲ್ಲಿದ್ದರು. ಸಿಬ್ಬಂದಿ ಅವರನ್ನು ಕೆಳಗಿಳಿಸಲು ಹಗ್ಗಗಳನ್ನು ಬಳಸಿದ್ದರು ಮತ್ತು ಯಾವುದೇ ಗಾಯವಾಗದಂತೆ ಹಾಸಿಗೆಗಳನ್ನು ಕೆಳಗೆ ಇರಿಸಲಾಗಿತ್ತು. ಸ್ಥಳಾಂತರಿಸುವ ಸಮಯದಲ್ಲಿ, ನನ್ನ ತಾಯಿ ಜಾರಿ ಬಿದ್ದರು. ಅದು ಅಷ್ಟು ಗಂಭೀರವಾಗಿರಲಿಲ್ಲ. ಬಿದ್ದ ತಕ್ಷಣ ಅವರು ಎದ್ದು ನಿಂತರು ಎಂದು ಅವರ ಮಗ ವಿಶಾಲ್ ಹೇಳಿದರು.
ಆದರೆ, ಈ ಗೊಂದಲದ ನಡುವೆ, ಹೋಟೆಲ್ ಸಿಬ್ಬಂದಿ ತಾಯಿ ಮತ್ತು ತಂದೆಯನ್ನು ಬೇರೆ ಬೇರೆ ದಿಕ್ಕುಗಳಿಗೆ ಕರೆದೊಯ್ಯಬೇಕಾಯಿತು. ಪತಿಯಿಂದ ಹಠಾತ್ತನೆ ಬೇರ್ಪಟ್ಟ ಬಳಿಕ ಒತ್ತಡ ಮತ್ತು ಆಘಾತವು ತನ್ನ ತಾಯಿಯ ಸಾವಿಗೆ ಕಾರಣವಾಯಿತು ಎಂದು ವಿಶಾಲ್ ಹೇಳಿದರು.
ಅವರಿಗೆ ತಕ್ಷಣದ ಚಿಕಿತ್ಸೆ ಸಿಗಲಿಲ್ಲ, ಅವರು ಒಟ್ಟಿಗೆ ಇದ್ದಿದ್ದರೆ, ಅವರು ಸಾಯುತ್ತಿರಲಿಲ್ಲ ಎಂದು ವಿಶಾಲ್ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯ ಹೊರತಾಗಿಯೂ, ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಅವರಿಗೆ ಯಾವುದೇ ಸಹಾಯ ಸಿಗಲಿಲ್ಲ ಎಂದು ವಿಶಾಲ್ ಆರೋಪಿಸಿದ್ದಾರೆ. ಅವರ ತಂದೆ ಈಗ ಮೃತದೇಹವನ್ನು ರಸ್ತೆ ಮೂಲಕ ಗಾಜಿಯಾಬಾದ್ಗೆ ತರುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಭಾರತ-ನೇಪಾಳ ಗಡಿಯನ್ನು ತಲುಪುವ ನಿರೀಕ್ಷೆಯಿದೆ. ನಾವು ನಮ್ಮ ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.