ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ: ಕ್ಯಾಲಿಕಟ್ನಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಘೋಷಣೆ

ಕ್ಯಾಲಿಕಟ್ : ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕೇರಳ ಚುನಾವಣೆ ಪ್ರಚಾರದಲ್ಲಿರುವ ಅವರು, ಶುಕ್ರವಾರ ಕ್ಯಾಲಿಕಟ್ ನ ಬೇಪೂರ್ ವಿಧಾನ ಸಭೆ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಪಿ.ವಿ.ಅನ್ವರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹೆಣ್ಣು ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂ., ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವಿಮೆ, ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಸಿಕ ಪಿಂಚಣಿ, ಐದು ಲಕ್ಷ ರೂ.ವರೆಗೆ ಬಡ್ಡಿ ರಹಿತ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗಳನ್ನು ರಾಹುಲ್ ಗಾಂಧಿ ಇಲ್ಲಿಯೂ ಘೋಷಣೆ ಮಾಡಿದ್ದು, ನಮ್ಮ ಪಕ್ಷದ ಸರಕಾರಕ್ಕೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.
ಎಲ್ಡಿಎಫ್ ನವರು ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲೂ ಪ್ರತಿಪಕ್ಷದವರು ಹಾಗೆಯೆ ಹೇಳಿದ್ದರು. ನಾವು ಜಾರಿ ಮಾಡಲಿಲ್ಲವೆ? ಇಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಅವರ ಸಾಧನೆ ಶೂನ್ಯ ಎಂದು ಝಮೀರ್ ಅಹ್ಮದ್ ಟೀಕಿಸಿದರು.
ಕಾರ್ಯಕ್ರಮದ ನಂತರ ಝಮೀರ್ ಅಹ್ಮದ್ ಖಾನ್, ಯಳತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬಾಲಕೃಷನ್ ಪರ ರೋಡ್ ಶೋ ನಡೆಸಿದರು.
