ಪ್ಲಾಟ್ ಖರೀದಿ ಪ್ರಕರಣದಲ್ಲಿ ಗ್ರಾಹಕರಿಗೆ ನ್ಯಾಯ: ಡೆವಲಪರ್ಗೆ ಪ್ಲಾಟ್ ನೊಂದಣಿಗೆ ಆದೇಶ

ಧಾರವಾಡ : ಹುಬ್ಬಳ್ಳಿಯಲ್ಲಿ ಪೋಲೀಸ ಪೇದೆಯಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವನಹಳ್ಳಿಯವರು 2022ರಲ್ಲಿ ಹುಬ್ಬಳ್ಳಿಯ ಅಮರಗೋಳದಲ್ಲಿ ರಾಜೇಶ್ವರಿ ಡೆವಲೆಪರ್ಸರವರಿಂದ ರೂ.13,37,462 ಗೆ ಸೈಟ್ ಖರೀದಿಸಿದ್ದರು. ಈ ಬಗ್ಗೆ ದೂರುದಾರರು ಒಟ್ಟು ರೂ.6,60,000 ಮುಂಗಡ ಹಣ ನೀಡಿದ್ದರು.
ಅದನ್ನು ಪಡೆದುಕೊಂಡ ಎದುರುದಾರ ರಾಜೇಶ್ವರಿ ಡೆವಲಪರ್ಸರವರು ದೂರುದಾರರಿಗೆ ದಿ:24/04/2023 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದರು. ಆದಷ್ಟು ಬೇಗ ಎನ್.ಎ ವಗೈರಾ ಮಾಡಿ ಖರೀದಿ ಪತ್ರ ನೊಂದಣಿ ಮಾಡಿಕೊಡುವುದಾಗಿ ಎದುರುದಾರ, ಡೆವಲಪರ ಒಪ್ಪಿದ್ದರು. ಎನ್.ಎ ವಗೈರಾ ಆದ ಮೇಲೆ ಎದುರುದಾರ ಡೆವಲಪರ ದೂರುದಾರರಿಗೆ ಖರೀದಿ ಕ್ರಯ ಪತ್ರ ನೋಂದಣಿ ಮಾಡಿ ಕೊಡದೇ ಅವರು ಕೊಟ್ಟಿದ್ದ ರೂ.6,60,000 ಹಣವನ್ನು ದೂರುದಾರರಿಗೆ ಹಿಂದಿರುಗಿಸಿದ್ದರು.
ಎದುರುದಾರ, ಡೆವಲಪರರವರ ಅಂತಹ ಕ್ರಮ, ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆಯಾಗುತ್ತದೆ ಅಂತಾ ಹೇಳಿ ತನಗೆ ಎದುರುದಾರರಿಂದ ಸೈಟ್ ಖರೀದಿ ಮಾಡಿಸಿಕೊಟ್ಟು ನ್ಯಾಯ ಒದಗಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.05/03/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರನಿಂದ ರೂ.6,60,000 ಮುಂಗಡ ಹಣ ಪಡೆದುಕೊಂಡು ಎದುರುದಾರ ಡೆವಲಪರ್ ಅವರಿಗೆ ಪ್ಲಾಟ್ ಖರೀದಿ ಬಗ್ಗೆ ಕರಾರು ಪತ್ರ ಬರೆದು ಕೊಟ್ಟಿದ್ದಾರೆ. ಎನ್.ಎ ವಗೈರಾ ಆದ ಮೇಲೆ ಬಾಕಿ ಹಣ ಪಡೆದು ಖರೀದಿ ಕ್ರಯ ಪತ್ರ ನೊಂದಣಿ ಮಾಡಿಕೊಡಲು ಎದುರುದಾರ, ಬಿಲ್ಡರ್ ಒಪ್ಪಿದ್ದಾರೆ. ದೂರುದಾರ ಬಾಕಿ ಹಣಕೊಟ್ಟು ಕ್ರಯ ಪತ್ರ ಪಡೆಯಲು ಸಿದ್ದರಿದ್ದಾರೆ. ಆದರೆ ಅವರಿಗೆ ಖರೀದಿ ಕ್ರಯ ಪತ್ರ ನೋಂದಣಿ ಮಾಡಿಕೊಡುವುದು ಖರೀದಿ ಒಪ್ಪಂದದ ನಿಯಮದ ಪ್ರಕಾರ ಎದುರುದಾರ, ಡೆವಲಪರರವರ ಕರ್ತವ್ಯವಾಗಿದೆ. ಆದರೆ ಎದುರುದಾರ, ಡೆವಲಪರರವರು ದೂರುದಾರರಿಗೆ ಕ್ರಯ ಪತ್ರ ನೋಂದಣಿ ಮಾಡಿಕೊಡದೇ ಅವರ ಮುಂಗಡ ಹಣವನ್ನು ವಾಪಸ್ಸು ಕೊಟ್ಟಿರುವುದು ಗ್ರಾಹಕರ ರಕ್ಷಣಾ ಕಾಯಿದೆಯಡಿ ಹೌಸಿಂಗ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ 15 ದಿವಸದೊಳಗಾಗಿ ದೂರುದಾರ ಎದುರುದಾರರಿಗೆ ಪ್ಲಾಟ್ ಖರೀದಿ ಹಣ ರೂ.13,37,462 ಸಂದಾಯ ಮಾಡಬೇಕು. ಎದುರುದಾರ ದೂರುದಾರರಿಂದ ಆ ರೀತಿ ಹಣ ಪಡೆಯಲು ಒಪ್ಪದ್ದಿದ್ದಲ್ಲಿ ದೂರುದಾರರು ಆ ಹಣವನ್ನು ಆಯೋಗದಲ್ಲಿ ಡಿಪಾಸಿಟ್ ಮಾಡಬೇಕು. ಆನಂತರ ಒಂದು ತಿಂಗಳೊಳಗಾಗಿ ಎದುರುದಾರ, ಡೆವಲಪರ ದೂರುದಾರರಿಗೆ ಖರೀದಿ ಒಪ್ಪಂದದ ಪ್ಲಾಟ್ನಂ.24 ನ್ನು ನೊಂದಣಿ ಮಾಡಿಕೋಡಬೇಕು. ಆ ರೀತಿ ಮಾಡಿ ಕೊಡಲು ಎದುರುದಾರ, ಡೆವಲಪರ ಒಪ್ಪದಿದ್ದಲ್ಲಿ ದೂರುದಾರರು ಆಯೋಗದ ನೆರವು ಪಡೆದು ಕೋರ್ಟ ಆಯುಕ್ತರನ್ನು ನೇಮಿಸಿಕೊಂಡು ಖರೀದಿ ಕ್ರಯ ಪತ್ರ ನೋಂದಣಿ ಮಾಡಿಕೊಳ್ಳಬಹುದು ಅಂತಾ ಆಯೋಗ ಆದೇಶಿಸಿದೆ. ಎದುರುದಾರರ ನಡಾವಳಿಕೆಯಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗು ಮಾನಸೀಕ ತೊಂದರೆಗಾಗಿ ಎದುರುದಾರರು ರೂ. ಒಂದು ಲಕ್ಷ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ 10 ಸಾವಿರ ಕೊಡುವಂತೆ ಆಯೋಗ ಡೆವಲಪರಗೆ ನಿರ್ದೇಶಿಸಿದೆ.