ಕೆಲಸಕ್ಕೆ ಸೇರಿ ₹18 ಕೋಟಿ ದೋಚಿ ಪರಾರಿ; ಬೆಂಗಳೂರಿನಲ್ಲಿ ನೇಪಾಳಿ ಗ್ಯಾಂಗ್ ಹವಾ!

ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈ ದರೋಡೆಯಲ್ಲಿ ನೇಪಾಳ ಮೂಲದ ಗ್ಯಾಂಗ್ ಇರೋದು ಬೆಳಕಿಗೆ ಬಂದಿದೆ.


ನೇಪಾಳದ ಈ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಿದ್ದರು. ದರೋಡೆ ಮಾಡುವ ಮುನ್ನ ಒಂದು ತಿಂಗಳಲ್ಲಿ ವೈಯಕ್ತಿಕ ಕಾರಣದ ನೆಪ ಹೇಳಿ ಕೆಲಸ ಬಿಡುತ್ತಿದ್ದರು. ಕೆಲಸ ಬಿಡುವ ಮುನ್ನ ಇದೇ ಗ್ಯಾಂಗ್, ಇಬ್ಬರನ್ನು ಕೆಲಸಕ್ಕೆ ಸೇರಿಸಿ ಹೋಗಿದ್ದರು. ಅದೇ ರೀತಿ ನಗರದ ಉದ್ಯಮಿ ಶಿವಕುಮಾರ್ ಅವರ ಮನೆಗೂ ಗ್ಯಾಂಗ್ನ ಕಮಲ ಹಾಗೂ ದಿನೇಶ್ ಎಂಬವರನ್ನು ಕೆಲಸಕ್ಕೆ ಸೇರಿಸಿದ್ದರು.
ಸಮಯ ನೋಡಿ ಈ ಗ್ಯಾಂಗ್ ಉದ್ಯಮಿಯ ಮನೆ ದರೋಡೆ ಮಾಡಿ ಪರಾರಿಯಾಗಿತ್ತು. ಡಿಸೆಂಬರ್ನಲ್ಲಿ ದಿನೇಶ್ ಮತ್ತು ಗ್ಯಾಂಗ್ ಪುಣೆಯಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿರೋದು ಪತ್ತೆಯಾಗಿದೆ. ಸದ್ಯ ಈ ನೇಪಾಳ ಮೂಲದ ಗ್ಯಾಂಗ್ ಬಗ್ಗೆ ಮಾಹಿತಿ ಕಲೆಹಾಕಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.