ಸಂಬಳ ಸಿಗದೇ ಜಯನಗರ ಆಸ್ಪತ್ರೆ ಗಣಕಯಂತ್ರ ಸಹಾಯಕರ ಪ್ರತಿಭಟನೆ!

ಬೆಂಗಳೂರು : ಮೂರು ತಿಂಗಳಿನಿಂದ ಸಂಬಳ ಸಿಗದೇ, ನೊಂದು ಬೆಂದಿದ್ದ ಜಯನಗರ ಸಾರ್ವಜನಿಕ ಆಸ್ಪತ್ರೆ ಗಣಕಯಂತ್ರ ಸಹಾಯಕರು ಇಂದು ಕೆಲಸಕ್ಕೆ ಬ್ರೇಕ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಎಫೆಕ್ಟ್ ನೇರವಾಗಿ ಬಡರೋಗಿಗಳಿಗೆ ತಟ್ಟಿತ್ತು. ಓಪಿಡಿ ಸ್ಲಿಪ್ ಸಿಗದೇ ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ರೋಗಿಗಳು ಕಂಗಲಾಗಿ ಹೋಗಿದ್ರು..
ಸಂಬಳ ಸಿಗದೇ ಸಿಬ್ಬಂದಿ ಕಂಗಾಲು, ಕೆಲಸ ನಿಲ್ಲಿಸಿ ಪ್ರತಿಭಟನೆ !
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 14 ಗಣಕಯಂತ್ರ ಸಹಾಯಕರು ಕೆಲಸ ಮಾಡ್ತಿದ್ದಾರೆ. ಕಾಂಟ್ರಾಕ್ಟ್ ನಡಿ ಇರುವ ಇವರಿಗೆ ಏಜೆನ್ಸಿ ಮೂಲಕ ಸಂಬಳ ಕೊಡಲಾಗುತ್ತದೆ. ಆದರೆ ಕಳೆದ ಫೆಬ್ರವರಿ ತಿಂಗಳಿನಿಂದ ಸಂಬಳ ನೀಡಿಲ್ಲ. ಏಜೆನ್ಸಿಯವರನ್ನು ಕೇಳಿದ್ರೆ ಆಸ್ಪತ್ರೆ ಆಡಳಿತ ಮಂಡಳಿ ಕೊಡಬೇಕು ಅಂತಾರೆ, ಆಸ್ಪತ್ರೆಯವರನ್ನು ಕೇಳಿದ್ರೆ ನಮ್ಮನ್ನು ಕೇಳಬೇಡಿ ಅಂತಾರೆ. ಇದೇ ಕಾರಣಕ್ಕೆ ಕಂಪ್ಯೂಟರ್ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದ್ರು..
ಇನ್ನು ಕೇವಲ ಜಯನಗರ ಸಾರ್ವಜನಿಕ ಆಸ್ಪತ್ರೆ ಗಣಕಯಂತ್ರ ಸಹಾಯಕರು ಮಾತ್ರವಲ್ಲ, ಡಿ ಗ್ರೂಪ್ ಸಿಬ್ಬಂದಿಗಳಿಗೂ ಸಂಬಳ ಆಗಿಲ್ಲ. ಅವರು ಕೂಡ ಕೆಲಸ ಬಂದ್ ಮಾಡಿ ಕುಳಿತಿದ್ದಾರೆ. ಇದರಿಂದ ರೋಗಿಗಳು ಗಂಟೇಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿತ್ತು.
ಸಂಬಳ ಆಗದಿದ್ದಕ್ಕೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷರನ್ನು ಪ್ರಶ್ನಿಸಿದಾಗ, ಹೌದು ಸಂಬಳ ಆಗಿಲ್ಲ. ಏಜೆನ್ಸಿಯವರು ಕೊಟ್ಟಿಲ್ಲ, ನಾವು ಅವರ ಜೊತೆ ಮಾತನಾಡಿದ್ದೇವೆ, ಇನ್ನೊಂದು ದಿನದಲ್ಲಿ ಸಂಬಳ ಕ್ಲಿಯರ್ ಆಗುತ್ತದೆ ಎಂದರು.. ಎಂಎಸ್ ಅವರೇ ಖುದ್ದು ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು..