ಜನಿವಾರ ವಿವಾದ : ವಿದ್ಯಾರ್ಥಿಗೆ ಎರಡು ಆಯ್ಕೆ ಸರ್ಕಾರ

ಬೆಂಗಳೂರು :ಜನಿವಾರ ತೆಗೆಯಲು ನಿರಾಕರಿಸಿ, ಗಣಿತ ಪರೀಕ್ಷೆಗೆ ಹಾಜರಾಗದೇ ಮನೆಗೆ ತೆರಳಿದ್ದ ಬೀದರ್ನ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ.
ಈ ಕುರಿತು ಪರಿಶೀಲಿಸಲು ನೇಮಿಸಿದ್ದ ತಜ್ಞರ ಸಮಿತಿಯು ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡಲು ಶಿಫಾರಸು ಮಾಡಿದೆ.
ಈ ಆಯ್ಕೆಯ ಜತೆಗೆ ಮತ್ತೆ ಪರೀಕ್ಷೆ ಬರೆಯುವ ಅವಕಾಶವನ್ನೂ ಸರ್ಕಾರ ವಿದ್ಯಾರ್ಥಿಯ ಮುಂದಿಟ್ಟಿದೆ.
ದೂರವಾಣಿ ಮೂಲಕ ವಿದ್ಯಾರ್ಥಿ ಜತೆ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ.
‘ತಜ್ಞರ ಸಮಿತಿಯ ಶಿಫಾರಸಿನಂತೆ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ನೀಡುವುದು, ಬೇಡವೆಂದರೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡುವುದಾಗಿ ವಿದ್ಯಾರ್ಥಿಗೆ ತಿಳಿಸಿದ್ದೇನೆ. ವಿದ್ಯಾರ್ಥಿ ಆಯ್ಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಪ್ಪಿಗೆ ನೀಡಲಿದೆ’ ಎಂದು ಸುಧಾಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕೆಇಎ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಏ.17ರಂದು ನಡೆಸಿದ್ದ ಗಣಿತ ಪರೀಕ್ಷೆಯಲ್ಲಿ ಬೀದರ್ನ ಸಾಯಿಸ್ಫೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಅಲ್ಲಿನ ಪ್ರಥಮ ದರ್ಜೆ ಸಹಾಯಕ ಸೂಚಿಸಿದ್ದರು. ಅದನ್ನು ನಿರಾಕರಿಸಿ, ಸುಚಿವ್ರತ್ ಕುಲಕರ್ಣಿ ಪರೀಕ್ಷಾ ಕೇಂದ್ರದಿಂದ ತೆರಳಿದ್ದರು. ಈ ಘಟನೆಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ವಿದ್ಯಾರ್ಥಿಗೆ ಭಾಲ್ಕಿಯಲ್ಲಿನ ತಮ್ಮ ಕಾಲೇಜಿನಲ್ಲಿ ಉಚಿತ ಎಂಜಿನಿಯರಿಂಗ್ ಸೀಟು ನೀಡುವ ಭರವಸೆ ನೀಡಿದ್ದಾರೆ.