ಮಂಗಳೂರು ರಸ್ತೆಗಳಲ್ಲಿ ಐಟಿಎಂಎಸ್ ಸಜ್ಜು: ಸಂಚಾರಿ ನಿಯಮ ಉಲ್ಲಂಘನೆಗೀಗ ತಕ್ಷಣದ ದಂಡ!

ಮಂಗಳೂರು :ಸಂಚಾರ ನಿಯಮ ಉಲ್ಲಂಘನೆಯ ಮೇಲೆ ಕಣ್ಣಿಡಲು ಮಂಗಳೂರು ನಗರದಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಅನುಷ್ಠಾನಗೊಳ್ಳಲಿದೆ. ಮಾತ್ರವಲ್ಲ, ನಿಯಮ ಉಲ್ಲಂ ಸಿದ ಕೆಲವೇ ಕ್ಷಣಗಳಲ್ಲಿ ಮೊಬೈಲ್ಗೆ ನೋಟಿಸ್ ಬರಲಿದೆ. ಅಂತೆಯೇ ಮೊಬೈಲ್(ಯುಪಿಐ) ಮೂಲಕವೇ ದಂಡ ಪಾವತಿಸಲು ಅವಕಾಶವಾಗಲಿದೆ.
ಇಷ್ಟು ಮಾತ್ರವಲ್ಲ, ಪದೇ ಪದೇ ನಿಯಮ ಉಲ್ಲಂ ಸುವವರ ಮಾಹಿತಿಯೂ ದಾಖಲಾಗಲಿದ್ದು ಅಂಥವರ ವಿರುದ್ಧ ಕಠಿನ ಕ್ರಮಕ್ಕೂ ಪೊಲೀಸರಿಗೆ ನೆರವಾಗಲಿದೆ.
ಎಐ ಆಧಾರಿತ “ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್’ನಡಿ (ಐಟಿಎಂಎಸ್) ನಗರ ವ್ಯಾಪ್ತಿಯ 190ಕ್ಕೂ ಅಧಿಕ ಕಡೆಗಳಲ್ಲಿ ಅತ್ಯಾಧುನಿಕ ಕೆಮರಾ, ರಾಡಾರ್ಗಳನ್ನು ಅಳವಡಿಸಲಾಗುತ್ತಿದ್ದು, ಕಾರ್ಯಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ದಂಡದ ಮೊತ್ತ ಪಾವತಿಗೆ ಸಂಬಂಧಿಸಿದಂತೆ ಎನ್ಐಸಿ (ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್) ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಮುಂದಿನ ಒಂದೆರಡು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ನಗರದ ಹೊರವಲಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕೆಮರಾಗಳನ್ನು ಅಳವಡಿಸಲು ಪೊಲೀ ಸರು ಯೋಜನೆ ಹಾಕಿಕೊಂಡಿದ್ದಾರೆ. ಕೆಲವೆಡೆ ಈಗಾಗಲೇ ಕೆಮರಾ ಅಳವಡಿಸಲಾಗಿದೆ. ಸದ್ಯ ಸ್ಮಾರ್ಟ್ಸಿಟಿಯ ಕಮಾಂಡ್ ಆಯಂಡ್ ಕಂಟ್ರೋಲ್ ಸೆಂಟರ್ನಲ್ಲಿ ಕೆಮರಾಗಳಲ್ಲಿ ದಾಖಲಾದ ವಿವರವನ್ನು ಗಮನಿಸಿ ಪೊಲೀಸರು ಪ್ರಕರಣ ದಾಖಲಿಸಿ ನೋಟಿಸ್ಗಳನ್ನು ರವಾನಿಸುತ್ತಿದ್ದಾರೆ.
ನೀವೂ ದೂರು ನೀಡಬಹುದು
ನಿಮ್ಮ ಕಣ್ಣೆದುರೇ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೆ, ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದರೆ ಪೊಟೋ, ವೀಡಿಯೋ ಗಳನ್ನು ಪೊಲೀಸ್ ಕಂಟ್ರೋಲ್ರೂಮ್ನ ಸಂಖ್ಯೆ 9480802321ಗೆ ಕಳುಹಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಘರ್ಷ ತಪ್ಪಿಸಲು ಬಾಡಿ ಕೆಮರಾ
ಸಂಚಾರ ನಿಯಮ ಉಲ್ಲಂ ಸುವವರ ಬೆನ್ನು ಬಿದ್ದು ಕೇಸು ದಾಖಲಿಸಲು, ದಂಡ ವಸೂಲಿ ಮಾಡಲು ಅನೇಕ ಬಾರಿ ಪೊಲೀಸರು ಹಿಂದೇಟು ಹಾಕುತ್ತಾರೆ. ಇದಕ್ಕೆ ಒಂದು ಕಾರಣ, ಸಿಬಂದಿ ಕೊರತೆಯಾದರೆ ಇನ್ನೊಂದು ಕಾರಣ ವಾಹನ ಚಾಲಕರು, ಸವಾರರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿಯುವುದು. ಇದೇ ಕಾರಣಕ್ಕೆ ಪೊಲೀಸರು ಹೆಚ್ಚು ಹೆಚ್ಚು ಬಾಡಿ ಕೆಮರಾಗಳನ್ನು ಬಳಸಿಯೇ ವಾಹನಗಳ ತಪಾಸಣೆಗೆ ಮುಂದಾಗುತ್ತಿದ್ದಾರೆ. ವಾಹನ ಚಾಲಕರ ವರ್ತನೆ ಆ ಬಾಡಿ ಕೆಮರಾದಲ್ಲಿ ದಾಖಲಾಗುತ್ತದೆ.
ರಾತ್ರಿಯೂ ವಿಶೇಷ ಕಾರ್ಯಾಚರಣೆ
ರಾತ್ರಿ ವೇಳೆ ಪೊಲೀಸ್ ನಿಗಾ ಇರುವುದಿಲ್ಲ ಎಂಬ ಉಡಾಫೆಯಿಂದ ಕೆಲವರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು, ಇದರಿಂದ ಅಪಘಾತಗಳು ಆಗುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ರಾತ್ರಿ ಮತ್ತು ಮುಂಜಾವ ವಿಶೇಷ, ದಿಢೀರ್ ಕಾರ್ಯಾಚರಣೆ ನಡೆಸಲಾಗುವುದು.
-ಕೆ. ರವಿಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ
ನಿಯಮ ಉಲ್ಲಂಘನೆ ಮೇಲೆ ನಿಗಾ
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರದೊಳಗಿನ ರಸ್ತೆಗಳಲ್ಲಿ ಹಲವೆಡೆ ಸುಗಮ ಸಂಚಾರ ಸವಾಲಾಗಿದೆ. ಕೆಲವೆಡೆ ರಸ್ತೆಯ ಅಭಿವೃದ್ಧಿಯಾಗಿದ್ದರೂ ಸರಿಯಾದ ಸುರಕ್ಷಾ ಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ. ರಸ್ತೆ ನಿರ್ಮಾಣವೇ ಅವೈಜ್ಞಾನಿಕ ರೀತಿಯಲ್ಲಿದೆ. ಈ ಬಗ್ಗೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರ, ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಕೆಲವೊಂದು ಸಂಚಾರ ನಿಯಮ ಪಾಲನೆಗೆ ರಸ್ತೆಯ ಸ್ಥಿತಿ ಕಾರಣವಾಗಬಹುದು. ಆದರೆ ಹೆಚ್ಚಿನ ಸಂಚಾರ ನಿಯಮಗಳನ್ನು ಉಡಾಫೆಯಿಂದಲೇ ಚಾಲಕರು ನಿರ್ಲಕ್ಷಿಸುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಚಾಲಕರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
-ಅನುಪಮ್ ಅಗರ್ವಾಲ್, ಪೊಲೀಸ್ ಆಯುಕ್ತರು, ಮಂಗಳೂರು