ವಿಜಯ್ ಮಲ್ಯ ಟ್ವೀಟ್ಗೆ SBI ರಿಪ್ಲೈ ಎಂಬ ಸುದ್ದಿ ನಿಜವೇ?

ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಕಪ್ (RCB) ಗೆದ್ದಿದೆ. ಬರೋಬ್ಬರಿ 18 ವರ್ಷದ ನಂತರ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದ ಸಂಭ್ರಮ ಅದರ ಅಭಿಮಾನಿಗಳಲ್ಲಿ, ಆಟಗಾರರಲ್ಲಿ ಮನೆಮಾಡಿದೆ. ಎಲ್ಲಕ್ಕಿಂತ ಗಮನ ಸೆಳೆದಿದ್ದು ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯಾ ಟ್ವೀಟ್.
ಅದಕ್ಕೂ ಮಿಗಿಲಾಗಿ ವಿಶೇಷ ಎನ್ನಿಸಿದ್ದು ವಿಜಯ್ ಮಲ್ಯ (Vijay Mallya) ಟ್ವೀಟ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಎಂಬ ಖಾತೆಯಿಂದ ಬಂದ ಪ್ರತಿಕ್ರಿಯೆ.ವಿಜಯ್ ಮಲ್ಯ ಅವರು ಭಾರತ ತೊರೆದಿದ್ದಾರೆ. ಕಿಂಗ್ ಫಿಶರ್ ಮತ್ತು ಯುನೈಟೆಡ್ ಸ್ಪಿರಿಟ್ಸ್ನ ಮಾಜಿ ಅಧ್ಯಕ್ಷ. ಇಲ್ಲಿನ ಬ್ಯಾಂಕ್ಗಳಲ್ಲಿ 9000 ರೂಪಾಯಿಗೂ ಅಧಿಕ ಸಾಲ ಮರುಪಾವತಿ ಬಾಕಿ ಉಳಿಸಿಕೊಂಡು, ವಿದೇಶದಲ್ಲೇ ಸೆಟ್ಲ್ ಆಗಿದ್ದಾರೆ. ಯುಕೆಯಿಂದ ಅವರನ್ನ ಭಾರತಕ್ಕೆ ಕರೆತರುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಬರುತ್ತಿಲ್ಲ. ಹಾಗಿದ್ದಾಗ್ಯೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುತ್ತಾರೆ.
ವಿಜಯ್ ಮಲ್ಯ ಟ್ವೀಟ್
ಮದ್ಯದೊರೆ ಎಂದೇ ಖ್ಯಾತರಾಗಿದ್ದ ವಿಜಯ್ ಮಲ್ಯ ಅವರು ಈ ಬಾರಿ ಆರ್ಸಿಬಿ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದಾರೆ. ʼಆರ್ಸಿಬಿ ಟೀಮ್ ಕೊನೆಗೂ 18 ವರ್ಷಗಳ ಬಳಿಕ ಚಾಂಪಿಯನ್ಸ್ ಆಗಿದೆ. 2025ರ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ತುಂಬ ಚೆನ್ನಾಗಿ ಆಡಿದೆ. ಅತ್ಯುತ್ತಮ ತರಬೇತಿ ಮತ್ತು ಸಹಾಯಕ ಸಿಬ್ಬಂದಿ ಸಹಕಾರದೊಂದಿಗೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆʼ ಈ ಸಲ ಕಪ್ ನಮ್ಮದೆ ಎಂದು ಒಂದು ಟ್ವೀಟ್ ಮಾಡಿದ್ದರು.
ಹಾಗೇ ಇನ್ನೊಂದು ಪೋಸ್ಟ್ ಹಾಕಿ ʼನಾನು ಆರ್ಸಿಬಿಯನ್ನ ಸಂಸ್ಥಾಪಿಸಿದಾಗ, ಬೆಂಗಳೂರು ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂಬುದು ನನ್ನ ಕನಸಾಗಿತ್ತು. ನಾನು ಕಿಂಗ್ ಕೊಹ್ಲಿಯನ್ನ ಆಯ್ಕೆ ಮಾಡುವ ಸೌಭಾಗ್ಯ ಪಡೆದಿದ್ದೆ. ಅಂದು ನಾನು ಆಯ್ಕೆ ಮಾಡಿಕೊಂಡ ಬಳಿಕ 18 ವರ್ಷಗಳ ಕಾಲ ಅವರು ಆರ್ಸಿಬಿ ಜೊತೆಗೇ ಇದ್ದಾರೆ. ಯುನಿವರ್ಸ್ ಬಾಸ್ ಎಂದೇ ಖ್ಯಾತಿಯಾದ ಕ್ರಿಸ್ ಗೇಲ್ ಮತ್ತು ಆರ್ಸಿಬಿ ಪಾಲಿಗೆ ಅಳಿಸಲಾಗದ ಇತಿಹಾಸ ಆಗಿರುವ ಎಬಿ ಡಿವಿಲಿಯರ್ಸ್ ಅವರನ್ನೂ ಆಯ್ಕೆ ಮಾಡಿಕೊಂಡಿದ್ದೆ. ಈಗ ಅಂತಿಮವಾಗಿ ಟ್ರೋಫಿ ಬೆಂಗಳೂರಿಗೆ ಬರುತ್ತಿದೆ. ಆರ್ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು ಎಂದೂ ಹೇಳಿದ್ದರು.
SBI ಟ್ವೀಟ್ ನಿಜಾನಾ?
ವಿಜಯ್ ಮಲ್ಯ ಟ್ವೀಟ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರಂತೂ ಮಲ್ಯ ಕಾಲೆಳೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಕರೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನ ಸೆಳೆದಿದ್ದು SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ಎಕ್ಸ್ ಖಾತೆಯಿಂದ ಬಂದ ಪ್ರತಿಕ್ರಿಯೆ. ವಿಜಯ್ ಮಲ್ಯ ಟ್ವೀಟ್ಗೆ ರಿಪ್ಲೈ ಮಾಡಿದ SBI ʼಸರ್..ಭಾರತಕ್ಕೆ ಬನ್ನಿ. ನಾವೆಲ್ಲ ಒಟ್ಟಾಗಿ ಆರ್ಸಿಬಿ ಗೆಲುವನ್ನ ಸಂಭ್ರಮಿಸೋಣʼ ಎಂದು ಹೇಳಿದೆ. ಅಷ್ಟೇ ಅಲ್ಲ, ಪ್ರೀತಿಪೂರ್ವಕ ಇಮೋಜಿ ಹಾಕಿದೆ. ಎಸ್ಬಿಐ ಮಾಡಿದ ಟ್ವೀಟ್ನ ಸ್ಕ್ರೀನ್ಶಾಟ್ನ್ನ ಉದ್ಯಮಿ ಹರ್ಷ ಗೋಯೆಂಕಾ ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಎಸ್ಬಿಐ ಕೂಡ ವಿಜಯ್ ಮಲ್ಯರನ್ನ ಟ್ರೋಲ್ ಮಾಡುವ ಹಾಗಾಯಿತಲ್ಲ ಎಂದು ನಕ್ಕಿದ್ದಾರೆ.ಆದರೆ ಈ ಫೋಟೋದ ನಿಜಾಂಶ ಏನೆಂದು ಎಂದು ಸರ್ಚ್ ಮಾಡಿದಾಗ..SBI ಅಧಿಕೃತ ಖಾತೆಯಿಂದ ಇಂಥ ಯಾವುದೇ ಟ್ವೀಟ್ ಮಾಡಲಾಗಿಲ್ಲ. ವಿಜಯ್ ಮಲ್ಯಾರನ್ನ ಟ್ರೋಲ್ ಮಾಡಲು ಹೀಗೆ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಮೊದಲು ಇದು ಎಸ್ಬಿಐನಿಂದ ಮಾಡಲಾದ ಟ್ವೀಟ್ ಎಂದೇ ಭಾವಿಸಲಾಗಿತ್ತು. ಆದರೆ SBI ಹೀಗೆಲ್ಲ ಟ್ವೀಟ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ ಒಂದಷ್ಟು ಮಾಧ್ಯಮಗಳು ಫ್ಯಾಕ್ಟ್ ಚೆಕ್ ನಡೆಸಿವೆ. xAI ಅಭಿವೃದ್ಧಿಪಡಿಸಿದ AI ಚಾಟ್ಬಾಟ್ ಆಗಿರುವ Grok ಮೂಲಕ ಫ್ಯಾಕ್ಟ್ ಚೆಕ್ ನಡೆಸಿದಾಗ ಇದು ಸುಳ್ಳು ಎಂಬುದು ಗೊತ್ತಾಗಿದೆ. ಎಸ್ಬಿಐ ಖಾತೆಯಿಂದ ಅಧಿಕೃತವಾಗಿ ಇಂಥ ಕಾಮೆಂಟ್ ಮಾಡಿಲ್ಲ. ಹೀಗೆ ಸರ್ಕ್ಯುಲೇಟ್ ಆಗುತ್ತಿರುವ ವೈರಲ್ ಮೆಸೇಜ್ ಅಧಿಕೃತವಲ್ಲ. ವಿಜಯ್ ಮಲ್ಯರನ್ನ ಟ್ರೋಲ್ ಮಾಡಲು ಹೀಗೆ ಮಾಡಲಾಗಿದೆ ಎಂದು Grok ತಿಳಿಸಿದೆ.