ನಿಷೇಧ ಕೇವಲ ಹೆಸರಿಗಷ್ಟೇ? ಅಡ್ಡೂರು ಸೇತುವೆ ಮೇಲೆ ಲಾರಿ ಸಂಚಾರ, ಸಾರ್ವಜನಿಕರ ಆಕ್ರೋಶ

ಬಂಟ್ವಾಳ : ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿಗೆ. ಈ ವೇಳೆ ರಾತ್ರಿ ಲಾರಿಯೊಂದು ಸೇತುವೆ ಮೇಲೆಯೇ ಹಾದು ಹೋಗಿದ್ದು ಸಾರ್ವಜನಿಕರು ಈ ವಿರುದ್ಧ ಕಿಡಿಕಾರಿದ್ದಾರೆ.
ಅಡ್ಡೂರು ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆ ಅಳವಡಿಸುವ ಜತೆಗೆ ಪೊಲೀಸ್ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿತ್ತು. ಬಳಿಕ ವಾಹನ ಡಿಕ್ಕಿಯಾಗಿಒಂದು ಬದಿಯ ಗಾರ್ಡ್ಗೆ ಹಾನಿಯಾಗಿದ್ದ ಕಾರಣ ಅದನ್ನು ತೆರವು ಮಾಡಲಾಗಿದ್ದು, ಮತ್ತೊಂದು ಬದಿಯ ತಡೆಯೇ ಇಲ್ಲ. ‘ಚೆಕ್ಪೋಸ್ಟ್ ಬರೀ ನಾಮಕಾವಸ್ಥೆಗೆ ಮಾಡಲಾಗಿದ್ದು, ಅಲ್ಲಿ ಯಾರೂ ಕೂಡ ನಿಲ್ಲುತ್ತಿಲ್ಲ’ ಎಂದು ಸಾರ್ವಜನಿಕರು ಆಕ್ರೋಶಿಸುತ್ತಿದ್ದಾರೆ.

ಸೇತುವೆಯ ಸಾಮರ್ಥ್ಯ ಕುಸಿದಿದೆ ಎಂದು ಘನ ವಾಹನ ಸಂಚಾರ ನಿಷೇಧಿಸಿ ಸೇತುವೆ ಸಾಮರ್ಥ್ಯ ವೃದ್ಧಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟು ಶಾಲಾ ವಾಹನಗಳು, ಬಸ್ಗಳು ಸೇರಿದಂತೆ ಯಾವುದಕ್ಕೂ ಸಂಚಾರಕ್ಕೆ ಅವಕಾಶವಿಲ್ಲ. ಬಸ್ಸಿಗೆ ಸಂಚರಿಸಲು ಅವಕಾಶ ನೀಡಿ ಎಂದು ಸಾಕಷ್ಟು ಹೋರಾಟಗಳು ನಡೆದರೂ ದ.ಕ. ಜಿಲ್ಲಾಡಳಿತ ಖಡಾಖಂಡಿತವಾಗಿ ಲಘು ವಾಹನ ಹೊರತುಪಡಿಸಿ ಯಾವುದೇ ವಾಹನಕ್ಕೂ ಅವಕಾಶ ನೀಡಿರಲಿಲ್ಲ.

ಈ ನಡುವೆ ರಾತ್ರಿ ಹೊತ್ತು ಸರಕು ತುಂಬಿದ ಲಾರಿಯೊಂದು ಯಾವುದೇ ಅಡೆ ತಡೆ ಇಲ್ಲದೆ ಸೇತುವೆಯನ್ನು ದಾಟುತ್ತಿದ್ದು, ಅದನ್ನು ಯಾರೋ ಹಿಂದಿನಿಂದ ಕಾರಿನಲ್ಲಿ ತೆರಳಿ ವೀಡಿಯೋ ಮಾಡಿದ್ದು, ಅದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ . ಈ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ‘ಸೇತುವೆಯನ್ನು ಹಗಲು ಹೊತ್ತು ಬಂದ್ ಮಾಡಿ, ರಾತ್ರಿ ವ್ಯವಹಾರ ಕುದುರಿಸುವ ಅಧಿಕಾರಿಗಳಿಗೆ ಧಿಕ್ಕಾರವಿರಲಿ’ , ‘ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದು, ಜಿಲ್ಲಾಧಿಕಾರಿಗಳೇ ಇದಕ್ಕೆ ನೀವೇ ಹೊಣೆ’ , ‘ನಾಟಕ ನಿಲ್ಲಿಸಿ, ಶಾಲಾ ವಾಹನಗಳು, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಹಗಲು ಹೊತ್ತು ಕೂಡ ಸೇತುವೆಯನ್ನು ತೆರವುಗೊಳಿಸಿ’ ಎಂಬೆಲ್ಲಾ ಆಕ್ರೋಶದ ಮಾತುಗಳು ಹರಿದಾಡುತ್ತಿವೆ.