ಸ್ಥಳಾಂತರವಾಗಲಿದೆಯೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ?

ಬೆಂಗಳೂರು : ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕನಕಪುರ ರಸ್ತೆ, ಕುಣಿಗಲ್, ಶಿರಾ ಬಿಟ್ಟು ರಾಮನಗರ ಜಿಲ್ಲೆಯ ಮಾಗಡಿ ಭಾಗದಲ್ಲಿ ಸದ್ದು ಮಾಡುತ್ತಿದೆ. ಮೊದಲಿಗೆ ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಜಾಗಗಳಲ್ಲಿ ಒಂದು ಫೈನಲ್ ಆಗಲಿದೆ ಎಂದು ಹೇಳಲಾಗಿತ್ತು.
ಕೇಂದ್ರ ತಂಡದಿಂದ ಸ್ಥಳ ಪರಿಶೀಲನೆ ನಡೆದ ಬಳಿಕ ಇನ್ನೇನು ಅಂತಿಮ ಜಾಗ ಘೋಷಣೆಯಾಗುತ್ತೆ ಎನ್ನುವ ಹೊತ್ತಿಗೆ ಇದೀಗ ಈ ಹೊಸ ಏರ್ಪೋರ್ಟ್ ಮಾಗಡಿಗೆ ಶಿಫ್ಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರ ಹಿಂದಿನ ಉದ್ದೇಶವೇನು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ..
ಮಾಗಡಿ ಬಳಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ, ಅದು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಹಲವಾರು ರೀತಿಯ ಅನುಕೂಲಗಳನ್ನು ಒದಗಿಸಲಿದೆ. ಮುಖ್ಯವಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ದಟ್ಟಣೆ ತಗ್ಗಿಸುವ ಜೊತೆಗೆ ರಾಮನಗರ ಜಿಲ್ಲಾ ಕೇಂದ್ರವನ್ನು ಬೆಂಗಳೂರಿನೊಂದಿಗೆ ಸೇರ್ಪಡೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಕನಕಪುರ ರಸ್ತೆ ಹಾಗೂ ಕುಣಿಗಲ್ಗೆ ಹೋಲಿಸಿದರೆ ಮಾಗಡಿಯು ಬೆಂಗಳೂರು ಭಾಗದಿಂದ ಸ್ವಲ್ಪ ದೂರವೇ ಇದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಅತಿ ಬ್ಯುಸಿಯಾದ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದ್ದು, 2033ರ ವೇಳೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ, ಎರಡನೇ ವಿಮಾನ ನಿಲ್ದಾಣವು ಈ ದಟ್ಟಣೆಯನ್ನು ಕಡಿಮೆ ಮಾಡಿ ಪ್ರಯಾಣಿಕರಿಗೆ ಸುಗಮ ಸೇವೆ ಒದಗಿಸುತ್ತದೆ. ಹೀಗಾಗಿ ಇನ್ನೊಂದು ದಶಕದ ದೃಷ್ಟಿಯಿಂದ ಮಾಗಡಿ ಕೂಡ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಪ್ರದೇಶ ಎಂದು ಹೇಳಲಾಗುತ್ತಿದೆ.
ಮಾಗಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಬೆಂಗಳೂರಿಗೆ ಮಾತ್ರವಲ್ಲದೆ ತುಮಕೂರು, ರಾಮನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಸಂಪರ್ಕವನ್ನು ಸುಲಭವಾಗಲಿದೆ. ಜೊತೆಗೆ ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಾಗಡಿ ರಸ್ತೆಗೆ ಮೈಸೂರು ರಸ್ತೆಯಿಂದ ಸಂಪರ್ಕ ಕಲ್ಪಿಸುವ ಮೇಜರ್ ಆರ್ಟೀರಿಯಲ್ ರಸ್ತೆ (ಎಂಎಆರ್) ಯೋಜನೆ ಪ್ರಗತಿಯಲ್ಲಿದ್ದು ಹೊಸ ವಿಮಾನ ನಿಲ್ದಾಣಕ್ಕೆ ಇದು ಸುಲಭ ಪ್ರವೇಶವನ್ನು ಒದಗಿಸುತ್ತದೆ. ಕ್ರಮೇಣ ಬೆಂಗಳೂರು ನಗರದ ಸಂಚಾರ ಕೂಡ ಸುಗಮಗೊಂಡು ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆ ಇದೆ.
ಕನಕಪುರ ರಸ್ತೆ, ಕುಣಿಗಲ್ ರಿಜೆಕ್ಟ್ ಆದ್ರೆ ಮಾಗಡಿ ಜಾಗವೇ ಫೈನಲ್?
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಕೂಡ ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಸಂಪರ್ಕ ಮತ್ತು ಮೂಲಸೌಕರ್ಯ ವೃದ್ಧಿಯಾಗುವ ಮೂಲಕ ತುಮಕೂರು, ರಾಮನಗರ, ಮಂಡ್ಯ ಮತ್ತು ಹಾಸನ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ತಿಳಿಸಿದ್ದರು. ಹಾಗಾಗಿ ಅಧಿಕಾರಿಗಳು ಮಾಗಡಿ ತಾಲ್ಲೂಕು, ಸೋಲೂರು ಸೇರಿದಂತೆ ಹಲವೆಡೆ ಸಮೀಕ್ಷೆ ನಡೆಸಿದ್ದಾರೆ.
ರಾಜ್ಯ ಸರ್ಕಾರವು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಕನಕಪುರ ರಸ್ತೆ ಹಾಗೂ ಕುಣಿಗಲ್ ಬಳಿ ಜಾಗಗಳನ್ನು ಗುರುತಿಸಿ, ಅನುಮೋದನೆಗಾಗಿ ಕಾಯುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ತಂಡ ಬಂದು ಈ ಸ್ಥಳಗಳಲ್ಲಿ ವೀಕ್ಷಿಸಿ ಹೋಗಿದೆ. ಒಂದು ವೇಳೆ ಈ ಎರಡೂ ಜಾಗಗಳು ರಿಜೆಕ್ಟ್ ಆದಲ್ಲಿ ಮಾಗಡಿ ಬಳಿಯ ಸ್ಥಳವನ್ನು ಆಯ್ಕೆಯಾಗಿ ತೋರಿಸಲು ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಾವಿರಾರು ಎಕರೆ ಭೂಪ್ರದೇಶವದ ಸಮೀಕ್ಷೆ ನಡೆದಿದೆ ಎಂದು ವರದಿಯಾಗಿದೆ.