90 ವರ್ಷದ ವೃದ್ಧನಿಗೆ 100 ವರ್ಷಗಳ ಬಳಿಕ ಮೆಚೂರ್ ಆಗುವ ವಿಮೆ ಮಾರಾಟ!

ನವದೆಹಲಿ: ಇತ್ತೀಚೆಗೆ ಕೆನರಾ ಬ್ಯಾಂಕ್ ತನ್ನ ವರ್ಚಸ್ಸನ್ನು ಕೆಡಿಸಿಕೊಳ್ಳುತ್ತಿದೆ. ಇದಕ್ಕೆ ಬ್ಯಾಂಕಿನ ಮ್ಯಾನೇಜರ್ಗಳೇ ಮಾಡುವ ಎಡವಟ್ಟುಗಳೇ ಸಾಕ್ಷಿಯಾಗಿವೆ. ಕೆಲ ದಿನಗಳ ಹಿಂದೆ ಬ್ಯಾಂಕ್ನಲ್ಲಿ ಗ್ರಾಹಕರು ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಬಂದಂತಹ ಘಟನೆ ನಡೆದಿತ್ತು. ಅದಾದ ನಂತರ ಬ್ಯಾಂಕಿನ ಮ್ಯಾನೇಜರೇ ಗ್ರಾಹಕನ ಹೆಸರಲ್ಲಿ ಸಾಲ ಪಡೆದು 3 ಕೋಟಿ ವಂಚಿಸಿ ಪರಾರಿಯಾದ ಘಟನೆಗಳು ನಡೆದಿವೆ. ಇವೆಲ್ಲಾ ಘಟನೆಗಳು ಪ್ರತಿಷ್ಠಿತ ಬ್ಯಾಂಕ್ ಎನಿಸಿದ ಕೆನರಾ ಬ್ಯಾಂಕ್ನ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಜನ ಅನುಮಾನದಿಂದ ನೋಡುವಂತಾಗಿದೆ. ಹೀಗಿರುವಾಗ ಈಗ ಮಾಹಾರಾಷ್ಟ್ರದಲ್ಲಿ ಹಿರಿಯನಾಗರಿಕೊಬ್ಬರಿಗೆ ಕೆನರಾ ಬ್ಯಾಂಕ್ನವರು ಚಾಣಾಕ್ಷತನದಿಂದ ವಂಚಿಸಿದ ಘಟನೆ ನಡೆದಿದೆ.

ವರ್ಷಕ್ಕೆ 2 ಲಕ್ಷ ಪ್ರೀಮಿಯಂ ಕಟ್ಟಬೇಕಾಗಿದ್ದ ವಿಮೆ
ಹೌದು ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು ಎಂಬುದು ಎಲ್ಲಾ ಬ್ಯಾಂಕ್ಗಳು ಮಾಡಿಕೊಂಡು ಬಂದಿರುವ ನಿಯಮಗಳು. ಆದರೆ ಇಲ್ಲಿ ಸ್ವತಃ ಬ್ಯಾಂಕ್ನ ವ್ಯವಸ್ಥಾಪಕರೇ ಹಿರಿಯ ನಾಗರಿಕರೊಬ್ಬರಿಗೆ ವಂಚಿಸಿದ್ದಾರೆ. ಹೌದು ಮಹಾರಾಷ್ಟ್ರದ 90 ವರ್ಷದ ವ್ಯಕ್ತಿಯೊಬ್ಬರಿಗೆ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರೊಬ್ಬರು ವಾಸ್ತವಕ್ಕೆ ಹತ್ತಿರವಲ್ಲದ ಅವರ ಬಳಕೆಗೆ ಯಾವತ್ತಿಗೂ ಸಿಗದಂತಹ ಅದರೆ ವಾರ್ಷಿಕವಾಗಿ 2 ಲಕ್ಷ ರೂ.ಗಳ ಪ್ರೀಮಿಯಂ ಪಾವತಿ ಮಾಡಬೇಕಾದ ಜೀವ ವಿಮಾ ಪಾಲಿಸಿಯನ್ನು ಚಾಣಾಕ್ಷತನದಿಂದ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2124ರಲ್ಲಿ ಮೆಚುರ್ ಆಗುವ ಜೀವವಿಮೆ ಮಾರಾಟ
ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿಕೊಂಡು ಆನ್ಲೈನ್ ಸೈಬರ್ ವಂಚಕರು ಮೋಸ ಮಾಡುವುದನ್ನು ಕೇಳಿರಬಹುದು. ಆದರೆ ಇಲ್ಲಿ ಬ್ಯಾಂಕ್ನವರೇ ವೃದ್ಧನಿಗೆ ವಂಚಿಸಿದ್ದಾರೆ. 90 ವರ್ಷದ ವೃದ್ಧನಿಗೆ 2124ರಲ್ಲಿ ಅಂದರೆ 100 ವರ್ಷಗಳ ನಂತರ ಮೆಚುರ್ ಆಗುವಂತಹ ಜೀವ ವಿಮೆಯೊಂದನ್ನು ಮಾರಾಟ ಮಾಡಿದ್ದಾರೆ. 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವಂತಹ ಈ ಜೀವವಿಮೆ ಯಾವ ಕಾರಣಕ್ಕೆ ಎಂಬುದು.

90 ವರ್ಷದ ವೃದ್ಧನಿಗೆ ಇನ್ಶ್ಯುರೆನ್ಸ್ ಮಾರಾಟ ಮಾಡಿ ಮೋಸ
ವೃದ್ಧನ ಸಂಬಂಧಿಯಾಗಿರುವ ಸಾಕೇತ್ ಎಂಬುವವರು ಈ ವಿಚಾರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಯಾರಾದರು ಸಹಾಯ ಮಾಡುವಂತೆ ಕೇಳಿದ ನಂತರವೇ ಈ ಪ್ರಕರಣ ಬೆಳಕಿಗೆ ಬಂದಿದೆ.ಮೋಸ ಹೋಗಿರುವ 90 ವರ್ಷದ ವೃದ್ಧ ನಾಗ್ಪುರ ಮೂಲದವರಾಗಿದ್ದು ತಮ್ಮ ಪತ್ನಿಯ ಅಜ್ಜ ಅವರಾಗಿದ್ದು, ಅವರು ಹಲವು ದಶಕಗಳಿಂದ ಕೆನರಾ ಬ್ಯಾಂಕ್ನ ನಿಷ್ಠಾವಂತ ಗ್ರಾಹಕರಾಗಿದ್ದಾರೆ. ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಲ್ಲಿ ಅವರು ಅಪಾರ ನಂಬಿಕೆ ಇರಿಸಿದ್ದರು. ಆದರೆ ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಸಾಕೇತ್ ಅವರು ಆರೋಪಿಸಿದ್ದಾರೆ.
2ಲಕ್ಷದಂತೆ 2 ವರ್ಷಗಳಿಂದ ವೃದ್ಧನ ಖಾತೆಯಿಂದ 4 ಲಕ್ಷ ಕಡಿತ
ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಆ ಹಿರಿಯ ನಾಗರಿಕರಿಗೆ ವರ್ಷಕ್ಕೆ 2 ಲಕ್ಷ ರೂ. ಪ್ರೀಮಿಯಂ ಪಾವತಿಸುವ ಜೀವ ವಿಮಾ ಪಾಲಿಸಿಯನ್ನು ಮಾರಾಟ ಮಾಡಿದರು ಮತ್ತು ಅದರ ಮುಕ್ತಾಯ ದಿನಾಂಕ 2124 ಆಗಿತ್ತು. ಅವರ ವಯಸ್ಸು, ಆರ್ಥಿಕ ಅರಿವಿನ ಕೊರತೆ ಮತ್ತು ವ್ಯವಸ್ಥಾಪಕರ ಮೇಲಿಟ್ಟ ಸಂಪೂರ್ಣ ನಂಬಿಕೆಯಿಂದಾಗಿ, ಆ ವೃದ್ಧ ವ್ಯಕ್ತಿ ವಿಮಾ ಪಾಲಿಸಿಯನ್ನು ಖರೀದಿಸಿದರು. ಹೀಗಾಗಿ ಕಳೆದೆರಡು ವರ್ಷಗಳಿಂದ ಪ್ರತಿ ವರ್ಷ 2 ಲಕ್ಷ ರೂ.ಗಳಂತೆ ಅವರ ಖಾತೆಯಿಂದ ಕಡಿತಗೊಳಿಸಲಾಗಿದ್ದು, ಒಟ್ಟು 4 ಲಕ್ಷ ರೂಪಾಯಿಗಳನ್ನುಅವರ ಖಾತೆಯಿಂದ ಕಡಿತಗೊಳಿಸಲಾಗಿತ್ತು. ಈ ಉಳಿತಾಯದ ಮೊತ್ತವು ಅವರ ಜೀವಮಾನದ ಉಳಿತಾಯದ ಪ್ರಮುಖ ಭಾಗವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಸಾಕೇತ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಒಮ್ಮೆಲೇ ವೈರಲ್ ಆಗಿದ್ದು, ಹಿರಿಯ ನಾಗರಿಕರಿಗೆ ಮೋಸ ಮಾಡಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ತೀವ್ರ ಅಸಮಾಧಾನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಯಸ್ಸಾದ ಗ್ರಾಹಕರ ಆರ್ಥಿಕ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸದೆ ಮಾರಾಟ ಗುರಿಗಳನ್ನು ಪೂರೈಸಲು ವ್ಯವಸ್ಥಾಪಕರು ಹೀಗೆ ವಿಮಾ ಪಾಲಿಸಿಯನ್ನು ಮಾರಾಟ ಮಾಡಿರಬಹುದು ಎಂದು ನೆಟ್ಟಿಗರು ಬ್ಯಾಂಕ್ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.
ಮ್ಯಾನೇಜರ್ ಮೇಲೆ ವೃದ್ಧ ಇಟ್ಟ ನಂಬಿಕೆಗೆ ದ್ರೋಹ
ಹಿರಿಯ ನಾಗರಿಕರನ್ನು ರಕ್ಷಿಸುವ ಬದಲು, ಬ್ಯಾಂಕ್ ವ್ಯವಸ್ಥಾಪಕರು ದಶಕಗಳ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡರು, ಇದು ಹಿರಿಯ ನಾಗರಿಕರಿಗೆ ಅವರ ಅಂತಿಮ ವರ್ಷಗಳಲ್ಲಿ ಅನಗತ್ಯ ಆರ್ಥಿಕ ಒತ್ತಡವನ್ನು ಉಂಟುಮಾಡಿತು. ಬ್ಯಾಂಕ್ ವ್ಯವಸ್ಥಾಪಕರು ನೈತಿಕವಾಗಿ ವರ್ತಿಸಬೇಕು, ವಿಶೇಷವಾಗಿ ಹಿರಿಯ ನಾಗರಿಕರು ಮಾರ್ಗದರ್ಶನಕ್ಕಾಗಿ ತಮ್ಮ ಮೇಲೆ ಅವಲಂಬಿತರಾಗಿದ್ದಾಗ ಅವರ ವೃದ್ದಾಪ್ಯದ ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಾಕೇತ್ ಹೇಳಿದರು.
ಪೋಸ್ಟ್ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಬ್ಯಾಂಕ್
ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ಗಂಟೆಗಳ ನಂತರ ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥರು ಮತ್ತು ಶಾಖಾ ವ್ಯವಸ್ಥಾಪಕರು ಮನೆಗೆ ಭೇಟಿ ನೀಡಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡಿದರು. ಒಂದು ವಾರದೊಳಗೆ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂಬ ಮಾಹಿತಿಯನ್ನು ನಂತರದ ಪೋಸ್ಟ್ ಮೂಲಕ ಸಾಕೇತ್ ಮಾಹಿತಿ ನೀಡಿದ್ದಾರೆ.
ಜೊತೆಗೆ ಸಾಕೇತ್ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲೂ ಕೆನರಾ ಬ್ಯಾಂಕ್ ಪ್ರತಿಕ್ರಿಯಿಸಿದ್ದು, ಹಾಯ್ ಸಾಕೇತ್, ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಾವು ಅದನ್ನು ಸಂಬಂಧಪಟ್ಟ ತಂಡಕ್ಕೆ ರವಾನಿಸುತ್ತೇವೆ. ಅಲ್ಲದೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಹಂಚಿಕೊಳ್ಳುವುದನ್ನು ತಡೆಯಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ಧನ್ಯವಾದಗಳು ಎಂದು ಹೇಳಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ಈ ವಿಷಯದ ಬಗ್ಗೆ ಆರ್ಬಿಐ ಮತ್ತು ಐಆರ್ಡಿಎಐ ಅನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.