ಪೌರಾಯುಕ್ತೆಗೆ ನಿಂದನೆ : ರಾಜು ಗೌಡ ಬಂಧನಕ್ಕೆ ಆಗ್ರಹ – ಡಾ. ಎಲ್. ಕೆ. ಸುವರ್ಣ

ಮಾತೃದೇವೋಭವ ಎಂಬ ಸಂಸ್ಕೃತಿಯುಳ್ಳ ನಮ್ಮ ದೇಶದಲ್ಲಿ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಹಾಗೂ ಪ್ರಾಣ ಬೆದರಿಕೆ ಒಡ್ಡಿರುವುದನ್ನು ಹಿಂದೂ ಸಮಾಜವು ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಎಲ್. ಕೆ. ಸುವರ್ಣ ಅವರು ಕಿಡಿಕಾರಿದ್ದಾರೆ. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಅಮೃತಾ ಗೌಡ ಅವರ ಮೇಲೆ ನಿಂದನೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎಂಬಾತನನ್ನು ಸರ್ಕಾರ ವಿಳಂಬ ಮಾಡದೆ ತಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುವಂತೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ರಸ್ತೆಯ ಮಧ್ಯೆ ಬ್ಯಾನರ್ ಅಳವಡಿಸಿ, ಅದನ್ನು ಪ್ರಶ್ನಿಸಿದ ದಕ್ಷ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ. ಇಂತಹ ಕಿಡಿಗೇಡಿ ಕೃತ್ಯವೆಸಗಿದ ವ್ಯಕ್ತಿಗಳು ಹಾಗೂ ಅದಕ್ಕೆ ಪ್ರಚೋದನೆ ನೀಡಿದ ಸಂಸ್ಥೆಗಳ ವಿರುದ್ಧ ರಾಜ್ಯ ಸರ್ಕಾರವು ಇತಿಹಾಸವೇ ಸ್ಮರಿಸುವಂತಹ ಕಠಿಣ ಕಾನೂನು ಕ್ರಮ ಮತ್ತು ದಂಡ ವಿಧಿಸಬೇಕು ಎಂದು ಮಾಧ್ಯಮಗಳ ಮೂಲಕ ರಾಜ್ಯ ಅಧ್ಯಕ್ಷರಾದ ಡಾ. ಎಲ್. ಕೆ. ಸುವರ್ಣ ಅವರು ಬಲವಾಗಿ ಒತ್ತಾಯಿಸಿದ್ದಾರೆ.”