ಪಾಕಿಸ್ತಾನಕ್ಕೆ ಭಾರತದ ಕಠಿಣ ಎಚ್ಚರಿಕೆ: ಮತ್ತೆ ದಾಳಿ ಮಾಡಿದರೆ ಮಣ್ಣಲ್ಲಿ ಹೂತು ಹಾಕುತ್ತೇವೆ

ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ಮಾತಿನಲ್ಲೂ ವೈರಿಗಳಿಗೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ, ಭಾರತದ ಸ್ಪಷ್ಟ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಆಪರೇಷನ್ ಸಿಂದೂರ್ ಬಳಿಕ ಕತ್ತರಿಸಿ ಹೋಗಿದ್ದ ಪಾಕಿಸ್ತಾನ ಪರಮಾಣು ಅಸ್ತ್ರ ಬಳಕೆ ಮಾಡುವ ಬೆದರಿಕೆ ಹಾಕಿತ್ತು. ಇದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ, ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪರಮಾಣು ಅಸ್ತ್ರ ಬಳಕೆ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡುತ್ತಿತ್ತು. ನಿಮ್ಮ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ. ನಾವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ನಾವು ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಎಲ್ಲದ್ದಕ್ಕೂ ಸಿದ್ಧವಿದೆ ಎಂಬ ಸಂದೇಶ ರವಾನಿಸಿದರು.
ಭಾರತ ಯಾವುದೇ ರೀತಿಯ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ. ಭಾರತದ ಸರ್ಜಿಕಲ್ ದಾಳಿಗಳು ಪಾಕಿಸ್ತಾನದ ಯುದ್ಧ ಸಿದ್ಧತೆಗಳನ್ನು ಛಿದ್ರಗೊಳಿಸಿವೆ. ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡುವ ಮೂಲಕ ಅವರ ಹೃದಯವನ್ನು ಹೊಡೆದು ಹಾಕಿತು. ಭವಿಷ್ಯದಲ್ಲಿ ಪಾಕಿಸ್ತಾನದ ನಡುವಳಿಕೆ ಮೇಲೆ ನಮ್ಮ ನಡೆ ನಿರ್ಧಾರವಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
ಮತ್ತೆ ದಾಳಿಗೆ ಮುಂದಾದ್ರೆ ಮಣ್ಣಲ್ಲಿ ಹೂತು ಹಾಕುತ್ತೇವೆ
ಯುದ್ಧದಲ್ಲಿ ಪ್ರತಿ ಬಾರಿ ಪಾಕಿಸ್ತಾನಕ್ಕೆ ಭಾರತ ಮಣ್ಣು ಮುಕ್ಕಿಸಿದೆ. ಭಾರತದ ಮೇಲೆ ಮತ್ತೆ ದಾಳಿಗೆ ಮುಂದಾದ್ರೆ ತಕ್ಕ ಪಾಠ ಕಲಿಸುತ್ತೇವೆ. ಮೇ 6, 7ರಂದು ನಮ್ಮ ಪ್ರತಿಜ್ಞೆಯ ಪ್ರತೀಕಾರವನ್ನು ತೋರಿಸಿದ್ದೇವೆ. ಪಾಕಿಸ್ತಾನ ಈಗ ಭಯೋತ್ಪಾದನೆ ತಡೆಗಟ್ಟುವುದಾಗಿ ಭರವಸೆ ನೀಡಿದೆ. ಹೀಗಾಗಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಒಂದು ವೇಳೆ ಮತ್ತೆ ದಾಳಿಗೆ ಮುಂದಾದ್ರೆ ಮಣ್ಣಲ್ಲಿ ಹೂತು ಹಾಕುತ್ತೇವೆ. ನಮ್ಮ ಷರತ್ತಿನ ಮೇಲೆ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತಿರುತ್ತೇವೆ. ಉಗ್ರರನ್ನು ಮಟ್ಟಹಾಕಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಗ್ರರ ಹೆಡ್ಕ್ವಾರ್ಟರ್ಸ್ಗಳನ್ನು ಭಾರತ ಹೊಡೆದುರುಳಿಸಿದೆ. ಪಾಕಿಸ್ತಾನದ ಕ್ಷಿಪಣಿ, ಡ್ರೋನ್ಗಳನ್ನು ನಮ್ಮ ಸೇನೆ ಹೊಡೆದುರುಳಿಸಿದೆ. ಉಗ್ರರ ವಿರುದ್ಧ ಭಾರತ ದಾಳಿ ಬಳಿಕ ಪಾಕ್ ರಕ್ಷಣೆ ಮೊರೆ ಹೋಯಿತು. ಭಾರತದ ದಾಳಿಯಿಂದ ರಕ್ಷಿಸುವಂತೆ ಇಡೀ ವಿಶ್ವದ ಮುಂದೆ ರಕ್ಷಿಸುವಂತೆ ಪಾಕಿಸ್ತಾನ ಮನವಿ ಮಾಡಿತು ಎಂದು ಲೇವಡಿ ಮಾಡಿದರು.