ಬ್ರಿಟನ್ ಮಾರುಕಟ್ಟೆಗೆ ಮೈಸೂರು ಸೀರೆ, ಬೇಳೆಕಾಳುಗಳಿಗೆ ಹಸಿರು ನಿಶಾನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಎರಡೂ ದೇಶಗಳ ಮಧ್ಯೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ವಹಿವಾಟು ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶೇ. 99ರಷ್ಟು ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಶೂನ್ಯ ತೆರಿಗೆ ಹಾಕುತ್ತದೆ. ಶೇ. 90ರಷ್ಟು ಬ್ರಿಟನ್ ಉತ್ಪನ್ನಗಳಿಗೆ ಭಾರತ ಸಾಕಷ್ಟು ಟ್ಯಾರಿಫ್ ಇಳಿಕೆ ಮಾಡಿದೆ.

ಸಾಂಪ್ರಾಯಿಕ ಕುಸುರಿ ಕಲೆ ಮತ್ತು ಕೌಶಲ್ಯ ಬೇಡುವ ಕೊಲ್ಹಾಪುರಿ ಚಪ್ಪಲಿ, ಬನರಾಸ್ ಸೀರೆ, ಮೈಸೂರು ಸಿಲ್ಕ್ ಸೀರೆ ಇತ್ಯಾದಿ ವಿವಿಧ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದೆ. ಈ ಸಣ್ಣ ಉದ್ಯಮಗಳಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಭಾರತದ ನಾರಿಶಕ್ತಿ ಮತ್ತಷ್ಟು ಗರಿಗೆದರುವ ಅವಕಾಶ ಇದೆ.
ರೈತರಿಗೆ ಮಹಾ ಗೆಲುವು..
ಭಾರತ ಮತ್ತು ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತೀಯ ರೈತರಿಗೆ ಅತಿ ಹೆಚ್ಚು ವರದಾನ ಸಿಕ್ಕಿದೆ. ಶೇ. 95ರಷ್ಟು ಕೃಷಿ ಉತ್ಪನ್ನಗಳಿಗೆ ಟ್ಯಾರಿಫ್ ರಹಿತ ಪ್ರವೇಶವನ್ನು ಬ್ರಿಟನ್ ನೀಡಿದೆ. ಅರಶಿನ, ಮೆಣಸು, ಏಲಕ್ಕಿ, ಉಪ್ಪಿನಕಾಯಿ, ಬೇಳೆಕಾಳುಗಳು ಇತ್ಯಾದಿ ಆಹಾರ ಉತ್ಪನ್ನಗಳಿಗೆ ಮುಕ್ತ ಪ್ರವೇಶ ಸಿಕ್ಕಿದೆ. ಹಣ್ಣ, ತರಕಾರಿಗಳಿಗೂ ಶೂನ್ಯ ಟ್ಯಾರಿಫ್ ಇದೆ.
ಟ್ಯಾರಿಫ್ ರಹಿತ ರಫ್ತಿನಿಂದಾಗಿ ಭಾರತದ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲಿದೆ. ಭಾರತದ ಜಾಗತಿಕ ಕೃಷಿ ರಫ್ತು ವರ್ಷಕ್ಕೆ 36.63 ಬಿಲಿಯನ್ ಡಾಲರ್ನಷ್ಟಿದೆ. ಇನ್ನು, ಬ್ರಿಟನ್ ದೇಶದ ಕೃಷಿ ಉತ್ಪನ್ನಗಳ ಆಮದು 37.52 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಭಾರತದಿಂದ ಸರಬರಾಜಾಗುವ ಆಹಾರ ಉತ್ಪನ್ನಗಳ ಮೌಲ್ಯ ಕೇವಲ 811 ಮಿಲಿಯನ್ ಡಾಲರ್. ಈಗ ಭಾರತೀಯ ಕೃಷಿ ಉತ್ಪನ್ನಗಳಿಗೆ ಆಮದು ಸುಂಕ ಇಲ್ಲದೇ ಇರುವುದರಿಂದ ಭಾರತದಿಂದ ಹೆಚ್ಚಿನ ರಫ್ತು ಆಗಬಹುದು. ಮುಂದಿನ ಮೂರು ವರ್ಷಗಳಲ್ಲಿ ಬ್ರಿಟನ್ಗೆ ಭಾರತದ ಕೃಷಿ ರಫ್ತು ಶೇ. 20ರಷ್ಟು ಹೆಚ್ಚುವ ನಿರೀಕ್ಷೆ ಇದೆ.
ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ. 44ರಷ್ಟು ಜನಸಂಖ್ಯೆ ಇರುವುದರಿಂದ ಒಟ್ಟಾರೆ ಸಾಕಷ್ಟು ಜನರಿಗೆ ಈ ಒಪ್ಪಂದವು ನೇರ ಮತ್ತು ಪರೋಕ್ಷವಾಗಿ ಲಾಭ ತರಲಿದೆ.