ಕಾಲ್ತುಳಿತದ ಪರಿಣಾಮ: ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯಗಳು ಬೇರೆಡೆಗೆ ಶಿಫ್ಟ್

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಜೂನ್.4) ನಡೆದ ಕಾಲ್ತುಳಿತದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಆಡಳಿತಾತ್ಮಕ ಸ್ಥಿರತೆಯ ಬಗ್ಗೆ ಬಿಸಿಸಿಐ ಕಳವಳ ಹೊಂದಿದೆ. ಇದೇ ಕಾರಣದಿಂದಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ‘ಎ’ ಮತ್ತು ಸೌತ್ ಆಫ್ರಿಕಾ ‘ಎ’ ನಡುವಿನ ಸರಣಿಯನ್ನು ಸ್ಥಳಾಂತರಿಸಲಾಗಿದೆ.
ಯಾವುದೇ ನಿರ್ದಿಷ್ಟ ಕಾರಣ ನೀಡದೇ ಭಾರತೀಯ ಕ್ರಿಕೆಟ್ ಮಂಡಳಿ ( ಬಿಸಿಸಿಐ ) ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರಕಟಣೆಯಲ್ಲಿ ಬೆಂಗಳೂರಿನ ಪಂದ್ಯಗಳನ್ನು ರಾಜ್ಕೋಟ್ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಇತ್ತ ಯಾವುದೇ ಕಾರಣಗಳನ್ನು ಪ್ರಸ್ತಾಪಿಸದೇ ಇದ್ದರೂ, ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಅದರಂತೆ ನವೆಂಬರ್ 13 ರಿಂದ 19 ರವರೆಗೆ ಇಲ್ಲಿ ನಡೆಯಲಿರುವ ಭಾರತ ‘ಎ’ ಮತ್ತು ಸೌತ್ ಆಫ್ರಿಕಾ ‘ಎ’ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಬೆಂಗಳೂರಿನ ಬದಲು ರಾಜ್ಕೋಟ್ನಲ್ಲಿ ಆಯೋಜಿಸಲಾಗುತ್ತಿದೆ.
ಹಾಗೆಯೇ ಬೆಂಗಳೂರಿನಲ್ಲಿ ನಡೆಯಬೇಕಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಕೂಡ ಸಹ ಬೇರೆಡೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 30 ರಿಂದ ಆರಂಭವಾಗಲಿರುವ ವುಮೆನ್ಸ್ ಒಡಿಐ ವರ್ಲ್ಡ್ಕಪ್ನ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಇದೀಗ ಕಾಲ್ತುಳಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಮಹಿಳಾ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯವನ್ನು ಬೇರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನು ಮುಂಬರುವ ಟಿ20 ವಿಶ್ವಕಪ್ ಕೂಡ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಇತ್ತ 2026ರ ಟಿ20 ವಿಶ್ವಕಪ್ಗೆ ಬಿಸಿಸಿಐ ನಿಗದಿಪಡಿಸಿದ ಸ್ಟೇಡಿಯಂಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಒಂದು. ಆದರೆ ಇದೀಗ ಬೆಂಗಳೂರಿನ ಪಂದ್ಯಗಳನ್ನು ಶಿಫ್ಟ್ ಮಾಡುತ್ತಿರುವ ಕಾರಣ, ಟಿ20 ವಿಶ್ವಕಪ್ ಪಂದ್ಯದ ಆತಿಥ್ಯದ ಹಕ್ಕು ಕೂಡ ಕರ್ನಾಟಕ ಕ್ರಿಕೆಟ್ ಮಂಡಳಿಯ ಕೈ ತಪ್ಪಲಿದೆ ಎನ್ನಲಾಗುತ್ತಿ
ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ದುರ್ಘಟನೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಅದರ ಮೊದಲ ಹೆಜ್ಜೆಯಾಗಿ ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಪಂದ್ಯಗಳನ್ನು ಸ್ಥಳಾಂತರಿಸಲು ಮುಂದಾಗಿದೆ. ಈ ಮೂಲಕ ದಾರುಣ ಘಟನೆಯ ಕಹಿ ನೆನಪು ಮಾಸುವ ತನಕ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸದಿರಲು ನಿರ್ಧರಿಸಿದೆ.