ಐಪಿಎಸ್ ಅಧಿಕಾರಿಯ ಗದ್ದೆಯಲ್ಲಿ ಅಕ್ರಮ ಮರಳು ರಾಶಿ! ವಕೀಲರಿಂದ ಗೃಹ ಸಚಿವರಿಗೆ ದೂರು

ಬೆಳಗಾವಿ : ಬೆಳಗಾವಿಯ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ, ಐಪಿಎಸ್ ಅಧಿಕಾರಿ ರವೀಂದ್ರ ಗದಾಡಿ ಅವರ ತಂದೆ ಹೆಸರಿನಲ್ಲಿರುವ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಬಳಿಯ ಗದ್ದೆಯಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹ ಪತ್ತೆಯಾಗಿದೆ. ಈ ಕುರಿತು ಕ್ರಮ ವಹಿಸುವಂತೆ ಕಳೆದ ಜ.31ರಂದು ಐಗಳಿ ಗ್ರಾಮದ ವಕೀಲರಾದ ವಿನೋದ್ ಚಕ್ರವರ್ತಿ, ಸುನೀಲ್ ಜುಂಜರವಾಡ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮರಳು ಜಪ್ತಿ ಮಾಡಿ ನೋಟಿಸ್ ಜಾರಿ:
ರವೀಂದ್ರ ಅವರ ತಂದೆಗೆ ಸೇರಿದ ಸ.ನಂ.215ರಲ್ಲಿ 1.5 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದಾರೆ. ಈ ಕುರಿತಾಗಿ ಅಥಣಿ ತಾಲೂಕು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಅಥಣಿ ತಹಸೀಲ್ದಾರ್ ಮತ್ತು ಐಗಳಿ ಪಿಎಸ್ಐಗೆ ವಿಡಿಯೋ ಸಹಿತ ದೂರು ಸಲ್ಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಆರ್ಐ ಸ್ಥಳ ಮಹಜರು ಮಾಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿನೋದ್ ಚಕ್ರವರ್ತಿ, ಸುನೀಲ್ ಜುಂಜರವಾಡ ಗೃಹ ಸಚಿವರಿಗೆ ಮಾಡಿರುವ ಮನವಿಯಲ್ಲಿ ಕೋರಿದ್ದಾರೆ.