ಚಿಕ್ಕನಾಯಕನಹಳ್ಳಿಯಲ್ಲಿ ಅಕ್ರಮ ಮದ್ಯ ಸಾಗಣೆ: ಕೆಆರ್ಎಸ್ ಕಾರ್ಯಕರ್ತರಿಂದ ಕಾರ್ಯವೈಖರಿ

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾಗ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ಕಾರ್ಯಕರ್ತರು ತಡೆ ಹಿಡಿದರು.
ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 8.30ರ ಸಮಯದಲ್ಲಿ ಮತ್ತಿಘಟ್ಟ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾಗ ಕೆಆರ್ಎಸ್ ಪಕ್ಷದ ಕಾರ್ಯಕರ್ತ ರಘುನಂದನ್ ಹಾಗೂ ಪುಟ್ಟಯ್ಯ ದ್ವಿಚಕ್ರ ವಾಹನ ತಡೆದು ವಿಚಾರಿಸಿದ್ದಾರೆ.
ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದಾಗ ಆರೋಪಿಗಳು ಮದ್ಯ ತುಂಬಿದ ಚೀಲ ಹಾಗೂ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಬಕಾರಿ ನಿರೀಕ್ಷಕ, ದ್ವಿಚಕ್ರ ವಾಹನ ಹಾಗೂ ಮದ್ಯದ ಚೀಲವನ್ನು ವಶಕ್ಕೆ ಪಡೆದರು.
‘ಚೀಲದಲ್ಲಿ ₹76 ಸಾವಿರ ಬೆಲೆಯ ಮದ್ಯ ಇದ್ದು ಸಂಬಂಧಪಟ್ಟಂತೆ ಯಾವ ಮದ್ಯದ ಅಂಗಡಿಯಿಂದ ಮಾರಾಟವಾಗಿದೆ ಎಂದು ತನಿಖೆ ಮಾಡಿ ನಂತರ ಮದ್ಯದ ಅಂಗಡಿ ಮೇಲೆ ಪ್ರಕರಣ ದಾಖಲು ಮಾಡುತ್ತೇವೆ. ದ್ವಿಚಕ್ರ ವಾಹನ ಹಾಗೂ ಮದ್ಯ ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳು ಮಂಚಸಂದ್ರ ಗ್ರಾಮದವರು ಎಂದು ತಿಳಿದುಬಂದಿದ್ದು ಬಂಧನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಹಾಗೂ ದ್ವಿಚಕ್ರ ವಾಹನದಲ್ಲಿ ನಾಮಫಲಕ ಇಲ್ಲದ ಕಾರಣ ವಾಹನ ಮಾಲೀಕರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.