ಪಾಕಿಸ್ತಾನ ಮತ್ತೊಮ್ಮೆ ಸವಾಲು ಹಾಕಿದರೆ, ಬೆಂಕಿಯಿಂದಲೇ ಉತ್ತರ: ಬ್ರಿಗೇಡಿಯರ್ ಮುದಿತ್ ಮಜಾಜನ್ ಎಚ್ಚರಿಕೆ

ಶ್ರೀನಗರ: ಪಾಕಿಸ್ತಾನ ಮತ್ತೊಮ್ಮೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ. ಬೆಂಕಿ ಮತ್ತು ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ ಎಂದು ಪೂಂಚ್ ಬ್ರಿಗೇಡ್ ಕಮಾಂಡರ್ ಬ್ರಿಗೇಡಿಯರ್ ಮುದಿತ್ ಮಜಾಜನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
`ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಮುದಿತ್ ಮಹಾಜನ್, ಪೂಂಚ್, ರಜೌರಿ, ಅಖ್ನೂರ್ ಪ್ರದೇಶದಲ್ಲಿ ನಡೆದ ದಾಳಿಯ ಬಗ್ಗೆ ಮಾಹಿತಿ ನೀಡಿದರು.
ಪಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ `ಆಪರೇಷನ್ ಸಿಂಧೂರ’ದ ಹೆಸರಿನಲ್ಲಿ ಭಾರತ ಪ್ರತೀಕಾರ ತೀರಿಸಿಕೊಂಡಿತು. ಈ ಕಾರ್ಯಾಚರಣೆಯಡಿಯಲ್ಲಿ ಪಾಕ್ ಉಗ್ರರ ನೆಲೆಗಳನ್ನ ಹೊಡೆದಾಕುವುದು ನಮ್ಮ ಉದ್ದೇಶವಾಗಿತ್ತು. ಆದರೆ ಪಾಕಿಸ್ತಾನ ಸೇನೆ, ಭಾರತೀಯ ನಾಗರಿಕರನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿತು. ಆದರೂ ಕೂಡ ಪಾಕಿಸ್ತಾನದ ಡ್ರೋನ್ಗಳನ್ನ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದು ಹಾಕಿ ಭಾರತೀಯ ನಾಗರಿಕರ ರಕ್ಷಣೆ ಮಾಡುವ ಕೆಲಸ ಮಾಡಿದ್ದೇವೆ. ನಮ್ಮ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಪಾಕಿಸ್ತಾನ ತನ್ನ ರಾಷ್ಟ್ರದ ಜನರ ಮುಂದೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದರು.
ಮುಂದುವರಿದು ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಅಷ್ಟೆ. ಭಾರತೀಯ ಸೇನೆ ಸಂಪೂರ್ಣವಾಗಿ ಸಿದ್ಧವಾಗಿದೆ. ಮತ್ತೊಮ್ಮೆ ಸವಾಲು ಹಾಕಿದರೆ ಬೆಂಕಿ ಮತ್ತು ರಾಷ್ಟ್ರದ ದೃಢಸಂಕಲ್ಪದೊಂದಿಗೆ ಉತ್ತರಿಸುತ್ತೇವೆ. ಈ ವೇಳೆ ಪಾಕ್ ಮೇಲೆ ನಡೆಸಿದ ಕಾರ್ಯಾಚರಣೆಯ ವೀಡಿಯೋ, ಫೋಟೊಗಳನ್ನು ಬಿಡುಗಡೆ ಮಾಡಿದರು.