ಪತ್ನಿ-ಪ್ರಿಯಕರನಿಂದ ಪತಿಯ ಕೊಲೆ ಶಂಕೆ: ಬಾವಿಯಲ್ಲಿ ಶವ ಪತ್ತೆ

ಗದಗ: ವಿವಾಹಿತ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದ್ದು, ಪತ್ನಿ ಹಾಗೂ ಪ್ರಿಯಕರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ರೋಣದ ಹಕಾರಿ ಕಾಲೋನಿ ನಿವಾಸಿ ಶಂಕ್ರಪ್ಪ ಅಲಿಯಾಸ್ ಮುತ್ತು ಕೊಳ್ಳಿ(30) ಮೃತ ದುರ್ದೈವಿ.ಶಂಕ್ರಪ್ಪ ಪ್ರೀತಿಸಿ ಮದುವೆಯಾಗಿದ್ದರೂ, ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಪತ್ನಿ, ಪ್ರಿಯಕರ ಶಿವಕುಮಾರ್ನೊಂದಿಗೆ ಸೇರಿ ಪತಿ ಶಂಕ್ರಪ್ಪನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಂತಕರು ಕೊಲೆ ಮಾಡಿ ಬಟ್ಟೆಯಿಂದ ಕೈಕಾಲು ಕಟ್ಟಿ, ಮೃತದೇಹಕ್ಕೆ ಹಾಸಿಗೆ ಸುತ್ತಿ ಬಾವಿಗೆ ಬಿಸಾಕಿದ್ದಾರೆ. ಮಂಗಳವಾರ ಮುಂಜಾನೆ ಮುಗಳಿ ಗ್ರಾಮದ ಜಮೀನೊಂದರ ಬಾವಿಯಲ್ಲಿ ಶಂಕ್ರಪ್ಪನ ಶವ ಪತ್ತೆಯಾಗಿದೆ.ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.