ರಾಜಸ್ಥಾನದಲ್ಲಿ ಪತಿ ಹತ್ಯೆ ಪತ್ನಿಯ ಕ್ರೂರತೆ ಬಯಲು – ಮಗನ ಹೇಳಿಕೆ ಪೊಲೀಸರಿಗೆ ಸುಳಿವು

ಜೈಪುರ: ಇತ್ತೀಚೆಗೆ ಕೊಲೆಗಾರರು ಹೊಸ ಹೊಸ ಮಾರ್ಗ, ಮಾದರಿಗಳನ್ನು ಬಳಸಿಕೊಂಡು ಹತ್ಯೆ ಮಾಡುತ್ತಿದ್ದಾರೆ. ತಾವು ಯಾರ ಕೈಗೂ ಸಿಗಬಾರದು ಎಂದು ಕೊಲೆಗಾರರು ಎಷ್ಟೇ ಜಾಣತನ ಉಪಯೋಗಿಸಿದರೂ ಒಂದಲ್ಲ ಒಂದು ರೀತಿಯಲ್ಲಿ ಅವರು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಇತ್ತೀಚೆಗೆ ಮೇಘಾಲಯಕ್ಕೆ ಹನಿಮೂನ್ ಹೋಗಿದ್ದ ರಾಜ ರಘುವಂಶಿ ದಂಪತಿ ನಿಗೂಢವಾಗಿ ಕಾಣೆಯಾಗಿದ್ದರು. ಅವರಲ್ಲಿ ರಾಜ ರಘುವಂಶಿಯ ಮೃತದೇಹ ಪತ್ತೆಯಾಗಿತ್ತು, ಆದರೆ, ಅವರ ಪತ್ನಿ ನಾಪತ್ತೆಯಾಗಿದ್ದರು. ಆಕೆ ಕೂಡ ಕೊಲೆಯಾಗಿರಬಹುದು ಎಂದು ಪೊಲೀಸರು ಎಲ್ಲ ಕಡೆ ಶವಕ್ಕಾಗಿ ಹುಡುಕಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ರಾಜ ರಘುವಂಶಿಯ ಪತ್ನಿ ಸೋನಂ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಆ ಅನುಮಾನವೇ ಕೊಲೆಗಾರರನ್ನು ಹಿಡಿಯಲು ಸಹಾಯ ಮಾಡಿತು. ಸೋನಂ ತನ್ನ ಪ್ರಿಯಕರನ ಜೊತೆ ಸೇರಿ ಸುಪಾರಿ ಕಿಲ್ಲರ್ಗಳ ಜೊತೆ ಗಂಡನನ್ನು ಕೊಲೆ ಮಾಡಿಸಿದ್ದಳು.
ಇದೀಗ ಅದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಅಲ್ವಾರ್ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಕಾಂಟ್ರಾಕ್ಟ್ ಕಿಲ್ಲರ್ ಗುಂಪಿನೊಂದಿಗೆ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ರಾಜ ರಘುವಂಶಿ ಹತ್ಯೆ ದೇಶಾದ್ಯಂತ ಸುದ್ದಿಯಾಗುವ ಕೆಲವು ದಿನಗಳ ಮೊದಲು, ಅಂದರೆ ಜೂನ್ 7ರಂದು ಖೇರ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಆದರೆ, ಮೇಘಾಲಯ ಕೊಲೆಗಿಂತ ಭಿನ್ನವಾಗಿ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದು ಆ ಮಹಿಳೆಯ 9 ವರ್ಷದ ಮಗ.
ಮೃತ ವ್ಯಕ್ತಿ ಮಾನ್ ಸಿಂಗ್ ಜಾಧವ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಪತ್ನಿ ಅನಿತಾ ಅವರು ತಮ್ಮ ಕುಟುಂಬ ಮತ್ತು ನೆರೆಹೊರೆಯವರಿಗೆ ತನ್ನ ಗಂಡ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ, ಆ ಸಾವಿನ ಎರಡು ದಿನಗಳ ನಂತರ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ‘ಕಾಶಿ ಚಿಕ್ಕಪ್ಪ’ ಬಗ್ಗೆ ಆ ಮಹಿಳೆಯ ಮಗ ಪೊಲೀಸರಿಗೆ ತಿಳಿಸಿದ್ದ. ಆ ಬಾಲಕನ ಹೇಳಿಕೆಯಿಂದಾಗಿ ಆ ಮಹಿಳೆಯೇ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ, ಅದು ಸಹಜ ಸಾವಲ್ಲ ಎಂಬುದು ಬಯಲಾಗಿದೆ.
ಕೊಲೆಯಾದ ರಾತ್ರಿ ನನ್ನ ತಾಯಿ ಮನೆಯ ಮುಖ್ಯ ದ್ವಾರವನ್ನು ತೆರೆದಿಟ್ಟಿದ್ದರು ಎಂದು ಮಗು ಪೊಲೀಸರಿಗೆ ತಿಳಿಸಿದೆ. ಆ ದಿನ ಮಧ್ಯರಾತ್ರಿ ಕಾಶಿ ಚಿಕ್ಕಪ್ಪ ಸೇರಿದಂತೆ ಹಲವಾರು ಪುರುಷರು ಮನೆಗೆ ನುಗ್ಗಿದರು. ಆ ಮಗು ಹೇಳಿದ ಕಾಶಿ ಚಿಕ್ಕಪ್ಪ (ಅವರ ನಿಜವಾದ ಹೆಸರು ಕಾಶಿರಾಮ್ ಪ್ರಜಾಪತ್) ಆ ಮಹಿಳೆಯ ಪ್ರಿಯಕರ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಮ್ಮ ರೂಂನಲ್ಲಿ ಮಲಗಿದ್ದ ಮಾನ್ ಸಿಂಗ್ ಜಾಧವ್ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ಮಗು ಕೂಡ ತನ್ನ ತಂದೆಯ ಪಕ್ಕದಲ್ಲೇ ಮಲಗಿತ್ತು.
ಪೊಲೀಸರ ತನಿಖೆ ವೇಳೆ, “ನಾನು ನಿದ್ರೆ ಮಾಡುತ್ತಿದ್ದಾಗ ಬಾಗಿಲಲ್ಲಿ ಸ್ವಲ್ಪ ಶಬ್ದ ಕೇಳಿಸಿತು. ನಾನು ಕಣ್ಣು ತೆರೆದಾಗ ನನ್ನ ತಾಯಿ ಗೇಟ್ ತೆರೆಯುವುದನ್ನು ನೋಡಿದೆ. ಕಾಶಿ ಚಿಕ್ಕಪ್ಪ ಹೊರಗೆ ನಿಂತಿದ್ದರು. ಅವರೊಂದಿಗೆ ಇನ್ನೂ 4 ಜನರಿದ್ದರು. ನನಗೆ ಭಯವಾಯಿತು, ನಾನು ಎದ್ದೇಳಲಿಲ್ಲ. ನಾನು ಎಲ್ಲವನ್ನೂ ಸದ್ದಿಲ್ಲದೆ ನೋಡಲಾರಂಭಿಸಿದೆ. ಅವರು ನಮ್ಮ ರೂಮಿಗೆ ಬಂದರು. ನಾನು ಎದ್ದು ನನ್ನ ತಾಯಿ ಹಾಸಿಗೆಯ ಮುಂದೆ ನಿಂತಿರುವುದನ್ನು ನೋಡಿದೆ. ಅಲ್ಲಿಗೆ ಬಂದ ಜನರು ನನ್ನ ಅಪ್ಪನನ್ನು ಹೊಡೆದರು, ಅವರ ಕಾಲುಗಳನ್ನು ತಿರುಚಿದರು ಮತ್ತು ಅವರನ್ನು ಉಸಿರುಗಟ್ಟಿಸಿದರು. ಕಾಶಿ ಚಿಕ್ಕಪ್ಪ ದಿಂಬಿನಿಂದ ಅಪ್ಪನ ಬಾಯಿ ಮುಚ್ಚಿದ್ದರು. ನಾನು ನನ್ನ ತಂದೆಯ ಬಳಿ ಹೋಗಲು ಪ್ರಯತ್ನಿಸಿದಾಗ, ಕಾಶಿ ಚಿಕ್ಕಪ್ಪ ನನ್ನನ್ನು ಎತ್ತಿಕೊಂಡು ಪಕ್ಕದ ರೂಂಗೆ ಹೋಗಿ ಹೆದರಿಸಿದರು. ಭಯದಿಂದ ನಾನು ಸುಮ್ಮನಾದೆ. ಅದಾದ ಕೆಲವೇ ನಿಮಿಷದಲ್ಲಿ ಅಪ್ಪ ಸತ್ತು ಹೋದರು. ಆಮೇಲೆ ಅವರೆಲ್ಲರೂ ಹೊರಟುಹೋದರು” ಎಂದು ಆ ಹುಡುಗ ಹೇಳಿದ್ದಾನೆ.
ಅನಿತಾ ಮತ್ತು ಕಾಶಿರಾಮ್ ಅವರ ವಿವಾಹೇತರ ಸಂಬಂಧದ ಕಾರಣದಿಂದಲೇ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಯನ್ನು ಮಾಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರು ನಾಲ್ವರು ಕಾಂಟ್ರಾಕ್ಟ್ ಕಿಲ್ಲರ್ಗಳಿಗೆ 2 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು. ನಂತರ ಹಠಾತ್ ಅನಾರೋಗ್ಯದಿಂದಾಗಿ ಗಂಡ ಸಾವನ್ನಪ್ಪಿದ್ದಾರೆ ಎಂದು ಆಕೆ ಸಂಬಂಧಿಕರಿಗೆ ತಿಳಿಸಿದರು. ಆದರೂ ಆ ದೇಹದ ಮೇಲಿದ್ದ ಗಾಯಗಳಿಂದ ಅನುಮಾನಗೊಂಡ ಪೊಲೀಸರು ತನಿಖೆ ಮಾಡಿದಾಗ ಕೊಲೆ ವಿಷಯ ಬಯಲಾಗಿದೆ.