ಖುಲಾ ಮೂಲಕ ವಿಚ್ಛೇದನಕ್ಕೆ ಪತಿಯ ಒಪ್ಪಿಗೆ ಅನಿವಾರ್ಯವಿಲ್ಲ – ತೆಲಂಗಾಣ ಹೈಕೋರ್ಟ್ ತೀರ್ಪು

ಹೈದರಾಬಾದ್: ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆಯ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಖುಲಾವನ್ನು ಒಂದು ನಿರ್ಧಾರವಾಗಿ ಪರಿಗಣಿಸಿದ ನ್ಯಾಯಲಯ, ಇದರಡಿ ಮಹಿಳೆಯರು ತಮ್ಮ ವಿವಾಹವನ್ನು ಕೊನೆಗೊಳಿಸಲು ಸ್ವತಂತ್ರವಾಗಿ ನಿರ್ಧರಿಸಬಹುದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎ.ರಾಜಶೇಖರ್ ರೆಡ್ಡಿ ಮತ್ತು ಎಂ.ಲಕ್ಷ್ಮಣ್ ಅವರ ದ್ವಿಸದಸ್ಯ ಪೀಠವು ಈ ಆದೇಶ ನೀಡಿದೆ. ಹೆಂಡತಿಯು ಖುಲಾ ಮೂಲಕ ಏಕಪಕ್ಷೀಯವಾಗಿ ತನ್ನ ಸಂಬಂಧವನ್ನು ಕೊನೆಗೊಳಿಸಬಹುದು ಮತ್ತು ಪತಿಯ ಅನುಮೋದನೆಯಾಗಲಿ ಅಥವಾ ಮುಫ್ತಿ ಅಥವಾ ದಾರ್-ಉಲ್-ಖಾಜಾ ಅವರಿಂದ ಖುಲಾನಾಮಾ ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.

ತನ್ನ ವೈವಾಹಿಕ ಜೀವನದಿಂದ ಮಹಿಳೆಯ ಸ್ವತಂತ್ರ ಹಕ್ಕನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಒತ್ತಿಹೇಳಿದೆ. ವೈವಾಹಿಕ ಜೀವನವನ್ನು ಕೊನೆಗೊಳಿಸಲು ನ್ಯಾಯಾಂಗ ಮುದ್ರೆ ಹಾಕುವುದು ನ್ಯಾಯಾಲಯದ ಏಕೈಕ ಪಾತ್ರವಾಗಿದೆ. ಅದಾದ ನಂತರ ಎರಡೂ ಕಡೆಯ ಅರ್ಜಿದಾರರ ಮೇಲೆ ಬದ್ಧವಾಗುತ್ತದೆ ಎಂದು ಪೀಠ ತಿಳಿಸಿದೆ.
ಕುಟುಂಬ ನ್ಯಾಯಾಲಯದ ಪಾತ್ರವು ಕೇವಲ ಮಹಿಳೆಯ ಖುಲಾ ಕೋರಿಕೆಯನ್ನು ಪರಿಶೀಲಿಸುವುದು, ರಾಜಿ ಪ್ರಯತ್ನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅನ್ವಯಿಸಿದರೆ ಪತ್ನಿಯ ವರದಕ್ಷಿಣೆ (ಮೆಹರ್) ಹಿಂದಿರುಗಿಸಲು ಸಿದ್ಧರಿದ್ದಾರೆಯೇ ಎಂದು ದೃಢೀಕರಿಸುವುದಕ್ಕೆ ಸೀಮಿತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವೈವಾಹಿಕ ವಿವಾದಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಸದಾ-ಇ-ಹಕ್ ಶರೈ ಕೌನ್ಸಿಲ್ ಎಂಬ ಸರ್ಕಾರೇತರ ಸಂಸ್ಥೆಗೆ ಪತ್ನಿ ಸಂಪರ್ಕಿಸಿದ್ದರು. ಆಕೆಯ ಖುಲಾ ಪ್ರಕರಣವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಈ ತೀರ್ಪು ಬಂದಿದೆ. ಅಂತ್ಯದಲ್ಲಿ ಪತಿ ಖುಲಾ ಸ್ವೀಕರಿಸಲು ನಿರಾಕರಿಸಿದರೆ ಅನುಸರಿಸಬೇಕಾದ ಯಾವುದೇ ಕಾರ್ಯವಿಧಾನವನ್ನು ಧಾರ್ಮಿಕ ಗ್ರಂಥಗಳು ವಿವರಿಸುವುದಿಲ್ಲ. ಇದು ಸಂಬಂಧವನ್ನು ಕೊನೆಗೊಳಿಸುವ ಮಹಿಳೆಯ ಸ್ವಾಯತ್ತ ಹಕ್ಕನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.