ಸಮೋಸ ತರಲು ಪತಿ ನಿರಾಕರಿಸಿದ್ದಕ್ಕೆ ಕೊಲೆಗೆ ಯತ್ನ: ಪತ್ನಿ ಸೇರಿದಂತೆ ನಾಲ್ವರ ಬಂಧನ

ಸಮೋಸ (Samosa) ತರಲು ಪತಿ ನಿರಾಕರಿಸಿದ್ದಕ್ಕೆ ಪತ್ನಿಯೊಬ್ಬಳು ತನ್ನ ಕುಟುಂಬಸ್ಥರೊಂದಿಗೆ (Assault Case) ಸೇರಿ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಲ್ಲದೆ ಕೊಲೆಗೆ (Crime) ಯತ್ನಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಆನಂದಪುರದಲ್ಲಿ ನಡೆದಿದೆ.

ಗಾಯಾಳು ವ್ಯಕ್ತಿಯನ್ನು ಶಿವಂ ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಸಂಗೀತಾ ಎಂಬಾಕೆಯ ಜೊತೆ ಶಿವಂ ಅವರ ಮದುವೆಯಾಗಿತ್ತು. ಗೃಹಿಣಿಯಾಗಿದ್ದ ಸಂಗೀತಾಗೆ ಪತಿ ಕೇಳಿದ್ದೆಲ್ಲ ಕೊಡಿಸುತ್ತಿದ್ದ. ಆದರೆ ಕಳೆದ ಕೆಲ ದಿನಗಳ ಹಿಂದೆ ಪತಿಯ ಬಳಿ ಸಮೋಸ ತರುವಂತೆ ತಿಳಿಸಿದ್ದಾಳೆ.
ಶಿವಂ ಯಾವುದೋ ಟೆನ್ಶನ್ ನಲ್ಲಿ ಇರುವಾಗ ಸಂಗೀತಾ ಸಮೋಸ ತರುವಂತೆ ಒತ್ತಾಯಿಸಿದ್ದರಿಂದ ಆಗಲ್ಲ ಎಂದು ಸಿಟ್ಟು ಮಾಡಿಕೊಂಡು ಹೊರ ನಡೆದಿದ್ದಾರೆ. ಇದರಿಂದ ಕುಪಿತಗೊಂಡ ಪತ್ನಿ ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಅಷ್ಟೇ ಅಲ್ಲದೆ ಪತಿ ಕೆಲಸ ಮುಗಿಸಿ ವಾಪಸ್ ಬರುವಾಗ ಸಮೋಸ ತರದಿರುವುದನ್ನು ಗಮನಿಸಿ ರಂಪಾಟ ಮಾಡಿದ್ದಾಳೆ. ಅಲ್ಲದೇ ಕುಟುಂಬದವರನ್ನು ಕರೆಸಿಕೊಂಡಿದ್ದಾಳೆ. ಇದಾದ ಮಾರನೇ ದಿನವೇ ಪತಿ – ಪತ್ನಿಯನ್ನು ಒಂದು ಮಾಡುವ ಸಲುವಾಗಿ ರಾಜಿ ಪಂಚಾಯತಿ ಮಾಡಿದ್ದಾರೆ.
ಈ ವೇಳೆ ಸಂಗೀತಾ ಕುಟುಂಬಸ್ಥರು ಏಕಾಏಕಿ ಶಿವಂ ಮೇಲೆ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದ ನೆರೆ ಹೊರೆಯವರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಡೆದಿದ್ದಾರೆ. ಅಲ್ಲದೇ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಶಿವಂ ತಾಯಿ ವಿಜಯ ಕುಮಾರಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಕೊಲೆ ಯತ್ನ ಸೇರಿದಂತೆ ಬಿಎನ್ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ಹಲ್ಲೆ ನಡೆಸಿದ ಪತ್ನಿ ಸಂಗೀತಾ, ಆಕೆಯ ಪೋಷಕರು ಉಷಾ, ರಾಮ್ಲಡೈಟ್ ಮತ್ತು ಮಾವ ರಾಮೋತಾರ್ ನನ್ನು ಬಂಧಿಸಲಾಗಿದೆ.
ಪ್ರತ್ಯೇಕ ಘಟನೆ.. ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಕೈಗೆ ಇಬ್ಬರು ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಲಾಸಿಪಾಳ್ಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೆಸಿ ರಸ್ತೆಯಲ್ಲಿ ಹರೀಶ್ ಕುಮಾರ್(38) ಎಂಬಾತನ ಮೇಲೆ ಹಲ್ಲೆ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು ಒಂದು ವಾರದಲ್ಲೇ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಜೆ.ಸಿ ರಸ್ತೆಯಲ್ಲಿ ಆಗಸ್ಟ್ 2 ರಂದು ರಾತ್ರಿ 10.30 ಕ್ಕೆ ನಡೆದ ಹಲ್ಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿಸಿತ್ತು.
ಆಟೋಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹರೀಶ್ ರಾತ್ರಿ ಹೊತ್ತು ಸ್ನೇಹಿತರ ಜೊತೆಗೆ ನಿಂತು ಮಾತನಾಡುತ್ತಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪ್ರಾಪ್ತರು ನೇರವಾಗಿ ಸಾಗುತ್ತಿದ್ದಿದ್ದನ್ನು ಕಂಡ ಹರೀಶ್ ಅವರಿಗೆ ಆ ಕಡೆ ಡೆಡ್ ಎಂಡ್ ಇದೆ ಎಂದು ಹೇಳಿದ್ದ.
ಇಷ್ಟಕ್ಕೇ ಕೋಪಗೊಂಡ ಆರೋಪಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಹರೀಶ್ ಕುಮಾರ್ ಕೈ ಗೆ ಗಂಭೀರವಾಗಿ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹರೀಶ್ ಹಲವು ದಿನಗಳ ಕಾಲ ಐಸಿಯುನಲ್ಲಿದ್ದ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.