ಕೈಗೆ ಕೋಳ ಹಾಕಿ ಟೀ ಮಾರಾಟದಿಂದ ಪ್ರತಿಭಟನೆ ಮಾಡುತ್ತಿರುವ ಪತಿ

ರಾಜಸ್ಥಾನ: ತನ್ನ ಪತ್ನಿಯ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಅದನ್ನು ವಿರೋಧಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಸುದ್ದಿಯಾಗಿದ್ದಾನೆ. ಇದ್ದಕ್ಕಿದ್ದಂತೆ ತನ್ನ ಅತ್ತೆ ಮನೆಯ ಎದುರೇ ಟೀ ಅಂಗಡಿ ತೆರೆದು, ತಮ್ಮ ಕೈಗಳಿಗೆ ಕೋಳ ಹಾಕಿಕೊಂಡು ಟೀ ಮಾರಾಟ ಮಾಡುತ್ತಿದ್ದಾನೆ.
ಅಲ್ಲದೆ, ಟೀ ಅಂಗಡಿಗೆ ವಿಭಿನ್ನವಾದ ಹೆಸರನ್ನು ಸಹ ಇಟ್ಟಿದ್ದಾನೆ. ಹೀಗಾಗಿ ಈ ಹೊಸ ಚಾಯ್ವಾಲಾ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾನೆ.
ಸದ್ಯ ಸುದ್ದಿಯಲ್ಲಿರುವ ಚಾಯ್ವಾಲಾನ ಹೆಸರು ಕೃಷ್ಣ ಕುಮಾರ್ ಧಕಾಡ್. ಈತ ರಾಜಸ್ಥಾನದ ನಿವಾಸಿ. ಪತ್ನಿಯ ಕಿರುಕುಳವನ್ನು ಸಹಿಸಲಾಗದೆ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಅಂದಹಾಗೆ, ಕೃಷ್ಣ ಕುಮಾರ್ 2018ರಲ್ಲಿ ಮೀನಾಕ್ಷಿ ಮಾಲವ್ ಎಂಬಾಕೆಯನ್ನು ವಿವಾಹವಾದರು. ಇಬ್ಬರು ಜೇನು ಸಾಕಣೆ ವ್ಯವಹಾರ ನಡೆಸುತ್ತಿದ್ದರು. ಈ ವ್ಯವಹಾರ ಸ್ಥಳೀಯ ಮಹಿಳೆಯರಿಗೆ ಸಬಲೀಕರಣ ನೀಡುವುದಲ್ಲದೆ, ದಂಪತಿಗೆ ಉತ್ತಮ ಮನ್ನಣೆಯನ್ನೂ ತಂದುಕೊಟ್ಟಿತು. ಆದಾಗ್ಯೂ, 2022ರಲ್ಲಿ ಕೃಷ್ಣ ಕುಮಾರ್ ಅವರ ಪತ್ನಿ ಹೇಳದೆ ಕೇಳದೆ ತನ್ನ ತವರಿಗೆ ತೆರಳಿದರು. ಇದಾದ ಕೆಲವೇ ತಿಂಗಳಲ್ಲಿ ಪತಿ ಕೃಷ್ಣನ ವಿರುದ್ಧ ಐಪಿಸಿ ಸೆಕ್ಷನ್ 498 ಎ (ವರದಕ್ಷಿಣೆ ಕಿರುಕುಳ) ಮತ್ತು ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಿದರು.
ತನ್ನ ಪತ್ನಿ ಸುಳ್ಳು ಪ್ರಕರಣ ದಾಖಲಿಸಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಕೃಷ್ಣ ಕುಮಾರ್ ಆರೋಪಿಸಿದ್ದಾರೆ. ಸುಳ್ಳು ಪ್ರಕರಣದಿಂದಾಗಿ ತನ್ನ ಜೀವನ ಹಾಳಾಗಿದೆ ಮತ್ತು ಕಳೆದ ಮೂರು ವರ್ಷಗಳಿಂದ ನ್ಯಾಯಕ್ಕಾಗಿ ಕೋರ್ಟ್ಗೆ ಅಲೆದಾಡುತ್ತಿದ್ದೇನೆ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ನನಗೆ ವಯಸ್ಸಾದ ತಾಯಿ ಇದ್ದಾರೆ.
ಅವರು ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸ್ತುತ ನಾನು ಒಂದು ಟಿನ್ ಶೆಡ್ನಲ್ಲಿ ವಾಸಿಸುತ್ತಿದ್ದೇನೆ. ನನಗೆ ಅಂತಾ ಏನೂ ಇಲ್ಲ. ನಾನು ಅನೇಕ ಬಾರಿ ಸಾವಿಗೆ ಶರಣಾಗುವ ಬಗ್ಗೆಯೂ ಯೋಚಿಸಿದ್ದೇನೆ. ಆದರೆ, ನನ್ನ ತಾಯಿಗೆ ನಾನೇ ಏಕೈಕ ಆಸರೆ. ಹೀಗಾಗಿ ಆತ್ಮಹತ್ಯೆಯಂತಹ ಆಲೋಚನೆಯನ್ನು ಕೈಬಿಟ್ಟಿದ್ದೇನೆ ಎಂದು ಕೃಷ್ಣ ನೋವು ತೋಡಿಕೊಂಡರು.
ಇನ್ನು ಕೃಷ್ಣ ಕುಮಾರ್ ಅವರು ಮಧ್ಯಪ್ರದೇಶದ ನೀಮಚ್ನಲ್ಲಿರುವ ಅಥಾನಾ ಗ್ರಾಮದಿಂದ ಸುಮಾರು 220 ಕಿಲೋಮೀಟರ್ ದೂರ ಪ್ರಯಾಣಿಸಿ ಕೋರ್ಟ್ ವಿಚಾರಣೆಗೆ ಬರುತ್ತಿದ್ದರು. ಪ್ರತಿ ಬಾರಿ ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಾಗಲೂ ಮೂಂದೂಡಿಕೆ ಆಗುತ್ತಿತ್ತು. ಇದರಿಂದ ಬೇಸತ್ತ ಕೃಷ್ಣ ಕುಮಾರ್, ರಾಜಸ್ಥಾನದ ಅಂತಾದಲ್ಲೇ ಟೀ ಸ್ಟಾಲ್ ನಡೆಸುವ ಮೂಲಕ ಕಾನೂನು ಹೋರಾಟ ನಡೆಸಲು ನಿರ್ಧರಿಸಿದರು. ಪತ್ನಿಗೆ ಪಾಠ ಕಲಿಸುವ ಉದ್ದೇಶದಿಂದ, ತಮ್ಮ ವಿರುದ್ಧ ಪತ್ನಿ ದಾಖಲಿಸಿದ ಪ್ರಕರಣವನ್ನು ವಿರೋಧಿಸಿ ಅತ್ತೆಯ ಮನೆಯ ಮುಂದೆಯೇ ಟೀ ಸ್ಟಾಲ್ ಆರಂಭಿಸಿದರು. ಆ ಟೀ ಸ್ಟಾಲ್ಗೆ ವಿಭಿನ್ನ ಹೆಸರನ್ನು ನೀಡಿದ್ದಾರೆ. ಪತ್ನಿ ಸಲ್ಲಿಸಿದ ವರದಕ್ಷಿಣೆ ಕಿರುಕುಳ ಸೆಕ್ಸನ್ ಅನ್ನೇ ಬಳಸಿಕೊಂಡು 498A ಕೆಫೆ ಎಂದು ಹೆಸರಿಟ್ಟಿದ್ದಾರೆ. ಇದಲ್ಲದೆ, ಪತ್ನಿ ದಾಖಲಿಸಿದ ಪ್ರಕರಣದಲ್ಲಿ ಮೂರು ವರ್ಷಗಳಿಂದ ಅನುಭವಿಸಿದ ನೋವನ್ನು ವ್ಯಕ್ತಪಡಿಸಲು ಕೈಗಳಿಗೆ ಕೋಳ ಹಾಕಿಕೊಂಡು ಟೀ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ, ಕೃಷ್ಣ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ತನ್ನ ಹೆಂಡತಿಯ ವರ್ತನೆಯನ್ನು ವಿರೋಧಿಸಿ ಕೃಷ್ಣಕುಮಾರ್ ತನ್ನ ಅತ್ತೆಯ ಮನೆಯ ಮುಂದೆ ಟೀ ಅಂಗಡಿ ಸ್ಥಾಪಿಸಿ, ಅಂಗಡಿಯ ಸುತ್ತಲೂ ಬ್ಯಾನರ್ಗಳನ್ನು ಹಾಕಿದ್ದಾನೆ. ನನಗೆ ನ್ಯಾಯ ಸಿಗುವವರೆಗೂ ಈ ಚಹಾ ಕುದಿಯುತ್ತಲೇ ಇರುತ್ತದೆ, ಚಹಾ ಕುಡಿಯುವಾಗ 125ರ ಸೆಕ್ಸನ್ ಅಡಿಯಲ್ಲಿ ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ಚರ್ಚಿಸೋಣ ಎಂದು ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೃಷ್ಣ ಕುಮಾರ್ ಅವರ ಕಥೆಯನ್ನು ಕೇಳಿದ ನೆಟ್ಟಿಗರು ತಮ್ಮದೇಯಾದ ರೀತಿಯಲ್ಲಿ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇನ್ನು ಗಂಡ ಕೃಷ್ಣ ಕುಮಾರ್ ವಿರುದ್ಧ ತಿರುಗಿಬಿದ್ದಿರುವ ಪತ್ನಿ ಮೀನಾಕ್ಷಿ ಮಾಲವ್, ನನ್ನ ತಂದೆಯಿಂದ ಭೂಮಿ ಖರೀದಿಸಲು ನನ್ನ ಗಂಡ ಹಣ ಕೇಳಿದರು. ನನ್ನ ತಂದೆ ಹಣ ಕೊಡಲು ನಿರಾಕರಿಸಿದಾಗ, ನನ್ನ ಮೇಲೆ ಹಲ್ಲೆ ಮಾಡಿದರು. ಹೀಗಾಗಿ, ನಾನು ನನ್ನ ತಂದೆಯ ಮನೆಗೆ ಮರಳಿದೆ. ನಾನು ವಿಚ್ಛೇದನಕ್ಕೂ ಸಿದ್ಧಳಾಗಿದ್ದೇನೆ. ಆದರೆ, ಮೊದಲು, ನನ್ನ ಹೆಸರಿನಲ್ಲಿ ತೆಗೆದುಕೊಂಡ ಎಲ್ಲ ಸಾಲಗಳನ್ನು ಮರುಪಾವತಿಸಬೇಕೆಂದು ಮೀನಾಕ್ಷಿ ಒತ್ತಾಯಿಸಿದ್ದಾರೆ.