ಜಾರ್ಖಂಡ್ನಲ್ಲಿ ಪತ್ನಿಯಿಂದಲೇ ಪತಿ ಕೊಲೆ: ಮದುವೆಯಾದ 36 ದಿನಗಳಲ್ಲೇ ವಿಷವಿಕ್ಕಿ ಹತ್ಯೆ!

ಜಾರ್ಖಂಡ್: ಒಲ್ಲದ ಮದುವೆಯಿಂದ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಪ್ರಕರಣಗಳು ದಿನದಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಇದೀಗ ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ಕೂಡ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿಯೊಬ್ಬಳು ಮದುವೆಯಾದ ಕೇವಲ 36 ದಿನಗಳಲ್ಲಿ ಪತಿಗೆ ವಿಷ ನೀಡಿ ಕೊಲೆ ಮಾಡಿದ್ದಾಳೆ.
ಸದ್ಯ ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಬಹೋಕುಂದರ್ ಗ್ರಾಮದ ನಿವಾಸಿ ಬುಧ್ನಾಥ್ ಸಿಂಗ್ ಹಾಗೂ ವಿಶುನ್ಪುರ ಗ್ರಾಮದ ರಘುನಾಥ್ ಸಿಂಗ್ ಅವರ ಪುತ್ರಿ ಸುನೀತಾಗೂ ಕಳೆದ ತಿಂಗಳು 11ರಂದು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ಮದುವೆಯಾದ ಮರುದಿನವೇ ಸುನೀತಾ ತನ್ನ ತವರು ಮನೆಗೆ ವಾಪಸ್ ಆಗಿದ್ದು, ನನಗೆ ಬುಧ್ನಾಥ್ ಇಷ್ಟವಿಲ್ಲ, ಆತನೊಂದಿಗೆ ಜೀವನ ನಡೆಸುವುದಿಲ್ಲ ಎಂದು ಹಠ ಹಿಡಿದಿದ್ದಳು.
ಎರಡೂ ಕಡೆಯ ಕುಟುಂಬದವರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದು, ಜೂನ್ 5ರಂದು ನಡೆದ ರಾಜಿ ಪಂಚಾಯತಿ ಬಳಿಕ ಸುನೀತಾ, ಪತಿ ಬುಧನಾಥ್ ಜೊತೆ ವಾಪಸ್ ತನ್ನ ಗಂಡನ ಮನೆಗೆ ಮರಳಿದಳು.
ತವರು ಮನೆಯವರ ಒತ್ತಾಯಕ್ಕೆ ಗಂಡನ ಮನೆಗೆ ಬಂದ ಸುನೀತಾ, ಜೂನ್ 14ರಂದು ಛತ್ತೀಸ್ಗಢದ ಮಾರುಕಟ್ಟೆಗೆ ತೆರಳಿದ್ದಾಗ ಒತ್ತಾಯ ಮಾಡಿ ಗಂಡ ಕೀಟನಾಶಕ ಖರೀದಿಸುವಂತೆ ಮಾಡಿದ್ದಾಳೆ. ಬಳಿಕ ಜೂನ್ 15ರ ರಾತ್ರಿ ಊಟದಲ್ಲಿ ಕೀಟನಾಶಕ ಬೆರೆಸಿ ಗಂಡನಿಗೆ ತಿನಿಸಿದ್ದಾಳೆ ಎನ್ನಲಾಗಿದೆ. ಮರುದಿನ ಬೆಳಗ್ಗೆ ಬುಧನಾಥ್ ಮಲಗಿದಲ್ಲಿಯೇ ಮೃತಪಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.