ಕ್ರಿಕೆಟ್ ನೋಡಿ ಮರಳುತ್ತಿದ್ದ ಯುವತಿ ಮೇಲೆ ಬಿದ್ದ ಬೃಹತ್ ಮರದ ಕೊಂಬೆ; ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ಬೆಂಗಳೂರು: ಕ್ರಿಕೆಟ್ ನೋಡಿ ಮರಳುತ್ತಿದ್ದಾಗ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಸೋಲದೇವನಹಳ್ಳಿಯಲ್ಲಿ ನಡೆದಿದೆ.

24 ವರ್ಷದ ಕೀರ್ತನಾ ಸಾವನ್ನಪ್ಪಿರೋ ಯುವತಿ. ಹೆಬ್ಬಾಳ ಮೂಲದ ಯುವತಿ ಕೀರ್ತನಾ ಮತ್ತು ಆಕೆಯ ಸ್ನೇಹಿತೆ ಇಲ್ಲಿನ ಆಚಾರ್ಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಯಾಂಡಲ್ ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನೋಡೋಕೆ ಹೋಗಿದ್ರು.
ಕ್ರಿಕೆಟ್ ಮ್ಯಾಚ್ ನೋಡಿಕೊಂಡು ದ್ವಿಚಕ್ರ ವಾಹನದಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ಎರಡು ಬೈಕ್ ಮೇಲೆ ಮರದ ಕೊಂಬೆ ಬಿದ್ದಿದ್ದು, ಪರಿಣಾಮ ಕೀರ್ತನಾ ಸ್ಥಳದಲ್ಲೇ ಮೃತಪಟ್ಟರೇ ಆಕೆಯ ಸ್ನೇಹಿತೆ ಮತ್ತು ಮತ್ತೊಂದು ಬೈಕ್ನಲ್ಲಿದ್ದ ಭಾಸ್ಕರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ಇಬ್ಬರನ್ನು ಇಲ್ಲಿನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕೀರ್ತನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.