ಲಾಹೋರ್ ಭಾರತಕ್ಕೆ ಸೇರುವ ಕನಸು ಹೇಗೆ ಭಂಗವಾಯಿತು?

ಲಾಹೋರ್ :ಪಾಕಿಸ್ತಾನ ದ ಪ್ರಸಿದ್ಧ ನಗರಗಳಲ್ಲಿ ಲಾಹೋರ್ ಸೇರಿದೆ. ಶತಮಾನಗಳಷ್ಟು ಹಳೆಯ ಪರಂಪರೆ ಹಾಗೂ ಸೌಂದರ್ಯಕ್ಕೆ ಲಾಹೋರ್ ಹೆಸರುವಾಸಿಯಾಗಿದೆ. ಭಾರತದ ಗಡಿಗೆ ಲಾಹೋರ್ ಬಹಳ ಹತ್ತಿರದಲ್ಲಿದೆ. ವಿಭಜನೆಯ ಸಮಯದಲ್ಲಿ ಈ ನಗರ ಭಾರತದ ಭಾಗವಾಗಬೇಕಿತ್ತು. ಭಾರತಕ್ಕೆ ಲಾಹೋರ್ ಸೇರ್ಬೇಕಿತ್ತು. ಆದ್ರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿ ರೇಖೆ ಎಳೆಯುತ್ತಿದ್ದ ವಕೀಲರ ಮನಸ್ಥಿತಿ ಬದಲಾಯ್ತು. ಏಕಾಏಕಿ ಲಾಹೋರವನ್ನು ಪಾಕಿಸ್ತಾನಕ್ಕೆ ನೀಡುವ ನಿರ್ಧಾರವನ್ನು ವಕೀಲರು ತೆಗೆದುಕೊಂಡಿದ್ದರು. ಹಾಗಾಗಿಯೇ ಈಗ ಲಾಹೋರ್ ಪಾಕ್ ಪಾಲಾಗಿದೆ. ಅದು ಹೇಗೆ, ಯಾರು ಲಾಹೋರನ್ನು ಪಾಕ್ ಗೆ ನೀಡಿದ್ದು ಎನ್ನುವ ವಿವರ ಇಲ್ಲಿದೆ.
ಭಾರತ ಸ್ವಾತಂತ್ರ್ಯ ಘೋಷಿಸಿದ ಎರಡು ದಿನಗಳ ನಂತ್ರ 1947 ರ ಆಗಸ್ಟ್ 17 ರಂದು ರಾಡ್ಕ್ಲಿಫ್ ವರದಿ ಜಾರಿಗೆ ಬಂದಿತು. ಲಾಹೋರ್ ಅನ್ನು ಭಾರತಕ್ಕೆ ನೀಡುವ ಬದಲು, ರಾಡ್ಕ್ಲಿಫ್ ಅದನ್ನು ಪಾಕಿಸ್ತಾನಕ್ಕೆ ನೀಡಿದರು. ಬಹಳ ದಿನಗಳ ನಂತರ, ರಾಡ್ಕ್ಲಿಫ್ ಈ ಬಗ್ಗೆ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರಿಗೆ ತಮ್ಮ ನಿರ್ಧಾರವನ್ನು ಬದಲಿಸಲು ಕಾರಣ ಏನು ಎಂಬುದನ್ನು ಹೇಳಿದ್ದರು.
ಲಾಹೋರ್ನಲ್ಲಿ ಹಿಂದೂಗಳು ಮತ್ತು ಸಿಖ್ಖರು ಹೆಚ್ಚಿನ ಸಂಪತ್ತನ್ನು ಹೊಂದಿದ್ದರು. ಪಾಕಿಸ್ತಾನದ ಭಾಗದಲ್ಲಿ ದೊಡ್ಡ ನಗರವಿಲ್ಲದ ಕಾರಣ ಲಾಹೋರ್ ಅನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ನಿರ್ಧರಿಸಿದ್ದಾಗಿ ರಾಡ್ಕ್ಲಿಫ್ ಈ ಸಂದರ್ಶನದಲ್ಲಿ ಹೇಳಿದ್ದರು. ಈ ಸಂದರ್ಶನದಲ್ಲಿ, ಸಿರಿಲ್ ರಾಡ್ಕ್ಲಿಫ್ ಲಾಹೋರ್ನಲ್ಲಿ ಹಿಂದೂಗಳು ಮತ್ತು ಸಿಖ್ಖರು ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆಂದು ಒಪ್ಪಿಕೊಂಡಿದ್ದರು.
ಗಡಿ ರೇಖೆ ಎಳೆಯಲು ಸಿರಿಲ್ ರಾಡ್ ಕ್ಲಿಫ್ಗೆ ಕೇವಲ 10-11 ದಿನಗಳು ಮಾತ್ರ ಸಿಕ್ಕಿದ್ದವು. ಈ ಸಮಯದಲ್ಲಿ ಸಿರಿಲ್ ಗಮನಿಸಿದ್ದು ಏನಂದ್ರೆ ಪಾಕಿಸ್ತಾನದ ಭಾಗದಲ್ಲಿ ದೊಡ್ಡ ನಗರ ಇಲ್ಲ ಎಂಬುದು. ಹಾಗಾಗಿಯೇ ನಾನು ಲಾಹೋರ್ ಅನ್ನು ಪಾಕಿಸ್ತಾನಕ್ಕೆ ಸೇರಿಸಿದೆ. ಪಾಕಿಸ್ತಾನಿಗರನ್ನು ಮೆಚ್ಚಿಸಬೇಕಾಗಿರುವುದರಿಂದ ಈ ನಿರ್ಧಾರವನ್ನು ಬಲವಂತವಾಗಿ ತೆಗೆದುಕೊಳ್ಳಲಾಗಿದೆ ಎಂದು ರಾಡ್ಕ್ಲಿಫ್ ಹೇಳಿದ್ದರು.
ನಕ್ಷೆಯಲ್ಲಿ ಎಳೆದ ರೇಖೆಯ ನಂತರ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳು ರೂಪುಗೊಂಡವು. ಲಕ್ಷಾಂತರ ಜನರು ಇಲ್ಲಿಂದ ಸ್ಥಳಾಂತರಗೊಂಡರು. ಲಕ್ಷಾಂತರ ಜನರು ಸಾವನ್ನಪ್ಪಿ ರಕ್ತಪಾತವಾಗಿತ್ತು. ವಿಭಜನೆಯ ನಂತರ ಇಷ್ಟೊಂದು ಹಿಂಸಾಚಾರ ನೋಡಿದ ರಾಡ್ಕ್ಲಿಫ್ ಚಡಪಡಿಸಿದ್ದರು. ಒಮ್ಮೆ ಬ್ರಿಟನ್ಗೆ ಹಿಂತಿರುಗಿದ ಅವರು ಮತ್ತೆಂದೂ ಭಾರತಕ್ಕೆ ಹಿಂತಿರುಗಲಿಲ್ಲ. ಅವರು ತಮ್ಮ 40,000 ರೂಪಾಯಿ ವೇತನವನ್ನು ಸಹ ತೆಗೆದುಕೊಳ್ಳಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯನ್ನು ಇಂದು ರಾಡ್ಕ್ಲಿಫ್ ಲೈನ್ ಎಂದು ಕರೆಯಲಾಗುತ್ತದೆ.
ಲಾಹೋರ್ ಅನ್ನು ನೋಡದವನು ಹುಟ್ಟಿಲ್ಲ ಎಂಬ ಮಾತು ಆಗ ಅಸ್ತಿತ್ವದಲ್ಲಿತ್ತು. ಈ ನಗರ, ಭಾರತ ಮತ್ತು ಪಾಕನ್ನು ವಿಭಜಿಸಿದ ಕಾರಣ ಇದನ್ನು ಭಾರತದ ದ್ವಾರ ಎಂದು ಕರೆಯಲಾಗುತ್ತಿತ್ತು. ಲಾಹೋರ್ ಮೂಲಕ ಹಾದು ಹೋಗದೆ ದೆಹಲಿಗೆ ಬರಲು ಸಾಧ್ಯವಿರಲಿಲ್ಲ. 2017 ರ ಅಂಕಿಅಂಶಗಳ ಪ್ರಕಾರ, ಲಾಹೋರ್ ಈಗ ತನ್ನ ಜನಸಂಖ್ಯೆಯ ಶೇಕಡಾ 94 ಕ್ಕಿಂತ ಹೆಚ್ಚು ಮುಸ್ಲಿಮರನ್ನು ಹೊಂದಿದೆ. ಲಾಹೋರ್ ಅನ್ನು ಈಗ ಪಾಕಿಸ್ತಾನದ ಹೃದಯ ಎಂದು ಕರೆಯಲಾಗುತ್ತದೆ. ಇಂದು, ಪಾಕಿಸ್ತಾನದ ಆದಾಯದ ಶೇಕಡಾ 11 ಕ್ಕಿಂತ ಹೆಚ್ಚು ಲಾಹೋರ್ನಿಂದಲೇ ಬರುತ್ತದೆ. ಅನೇಕ ಹಳೆಯ ದೇವಾಲಯಗಳು ಈಗ ಶಿಥಿಲಗೊಂಡಿವೆ. ಸ್ವಾತಂತ್ರ್ಯಕ್ಕೂ ಮುನ್ನ, ಲಾಹೋರ್ನಲ್ಲಿರುವ ಹೆಚ್ಚಿನ ಕಟ್ಟಡಗಳು, ಆಸ್ಪತ್ರೆಗಳು, ಮಹಲುಗಳು, ಮಾರುಕಟ್ಟೆಗಳು ಮತ್ತು ಭೂಮಿಯು ಮುಸ್ಲಿಮೇತರರ ಒಡೆತನದಲ್ಲಿತ್ತು. ಲಾಹೋರ್ ಸಿಖ್ ರಾಜ ಮಹಾರಾಜ ರಂಜಿತ್ ಸಿಂಗ್ ಅವರ ರಾಜಧಾನಿಯೂ ಆಗಿತ್ತು.