‘ಆಸ್ಪತ್ರೆ’ ಎಕ್ಸ್ಕ್ಯೂಸ್ ಮೇಲೆ ಹೋಟೆಲ್ನಲ್ಲಿ ಲವ್ ಮೀಟ್: ನಾಲ್ವರು ಕೈದಿಗಳ ಲಂಚದ ಆಟ ಬಯಲು

ಜೈಪುರ: ಜೈಪುರದ ಕೇಂದ್ರ ಕಾರಾಗೃಹದಲ್ಲೊಂದು ಹಗರಣ ಬೆಳಕಿಗೆ ಬಂದಿದೆ. ನಾಲ್ವರು ಕೈದಿಗಳು ತಮ್ಮ ಗೆಳತಿ ಹಾಗೂ ಪತ್ನಿಯರನ್ನು ಆಗಾಗ ಭೇಟಿಯಾಗಲು ಹಾಗೂ ಅವರೊಂದಿಗೆ ಹೊರಗಡೆ ತಿರುಗಾಟ ನಡೆಸಲು ಪೊಲೀಸರಿಗೆ ಲಂಚ ನೀಡಿರುವುದು ಬಯಲಾಗಿದೆ.
ಆಸ್ಪತ್ರೆಗೆ ಭೇಟಿಯಾಗಬೇಕೆಂದು ಅನುಮತಿ ಪಡೆದ ಕೈದಿಗಳು ಜೈಲಿನ ಹೊರಗೆ ಕೆಲವು ಗಂಟೆಗಳ ಕಾಲ ಸ್ವಾತಂತ್ರ್ಯವನ್ನು ಆನಂದಿಸಲು ಲಂಚ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ಕಾನ್ಸ್ಟೆಬಲ್ಗಳು, ನಾಲ್ವರು ಕೈದಿಗಳು ಮತ್ತು ನಾಲ್ವರು ಸಂಬಂಧಿಕರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಫೀಕ್ ಬಕ್ರಿ, ಭನ್ವರ್ ಲಾಲ್, ಅಂಕಿತ್ ಬನ್ಸಾಲ್ ಮತ್ತು ಕರಣ್ ಗುಪ್ತಾ ಎಂಬ ನಾಲ್ವರು ಕೈದಿಗಳು ಎಸ್ಎಂಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಅನುಮೋದನೆ ಪಡೆದಿದ್ದರು ಎನ್ನಲಾಗಿದೆ. ಆದರೆ ಅವರು ತಮ್ಮ ಅಪಾಯಿಂಟ್ಮೆಂಟ್ಗಳಿಗೆ ಹೋಗುವ ಬದಲು ನಗರದಲ್ಲಿ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಅವರು ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಒಬ್ಬ ಕೈದಿ ಮಾತ್ರ ಆಸ್ಪತ್ರೆಗೆ ತಲುಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 5:30 ರ ಗಡುವಿನೊಳಗೆ ನಾಲ್ವರಲ್ಲಿ ಯಾರು ಕೂಡಾ ಜೈಲಿಗೆ ಹಿಂತಿರುಗಲಿಲ್ಲ. ಕೈದಿಗಳು ಇದಕ್ಕಾಗಿ ಸುಮಾರು 25,000 ರೂ. ಮೊತ್ತದ ವ್ಯವಸ್ಥೆ ಮಾಡಿದ್ದರು. ಮಧ್ಯವರ್ತಿಯ ಮೂಲಕ ಇದನ್ನು ನಡೆಸಲಾಗಿತ್ತು. ಎಸ್ಕಾರ್ಟಿಂಗ್ ಕಾನ್ಸ್ಟೆಬಲ್ಗಳಿಗೆ ತಲಾ 5,000 ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಫೀಕ್ ಮತ್ತು ಭನ್ವರ್ ಕ್ರಮವಾಗಿ ತಮ್ಮ ಪತ್ನಿ ಮತ್ತು ಮಾಜಿ ಗೆಳತಿಯನ್ನು ಜಲಪುರ ಹೋಟೆಲ್ನಲ್ಲಿ ಭೇಟಿಯಾಗಿದ್ದಾರೆ. ಅಲ್ಲಿ ರಫೀಕ್ ಅವರ ಪತ್ನಿ ನಂತರ ಮಾದಕ ದ್ರವ್ಯ ಸೇವಿಸಿರುವುದು ಪತ್ತೆಯಾಗಿದ್ದು, ಅವರ ಮೇಲೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ತೇಜಸ್ವಾನಿ ಗೌತಮ್ ತಿಳಿಸಿದ್ದಾರೆ. ಸವಾಯಿ ಮಾನ್ ಸಿಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೈಪುರ ಕೇಂದ್ರ ಕಾರಾಗೃಹದಲ್ಲಿ ತನಿಖೆ ಮತ್ತು ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.