ಚಿಕ್ಕಬಳ್ಳಾಪುರದಲ್ಲಿ ದಾರುಣ ಘಟನೆ: ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆಯಲ್ಲಿ ನಡೆದಿದೆ.
ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ಮಕ್ಕಳಾದ ನಿಹಾರಿಕಾ (10) ನೇಹಾ (6) ವರ್ಷ ಮೃತರು. ಅಂದಹಾಗೆ ಗಂಡ ಜಯಣ್ಣನ ಜೊತೆ ನಿನ್ನೆ ಲಾವಣ್ಯ ವಾಗ್ವಾದ ನಡೆಸಿದ್ದರು. ಮಕ್ಕಳನ್ನ ಶಾಲೆಗೆ ಸೇರಿಸಬೇಕು ಚೆನ್ನಾಗಿ ದುಡಿ, ಏರ್ಪೋರ್ಟ್ಗೆ ಡ್ರೈವರ್ ಕೆಲಸಕ್ಕೆ ಹೋಗುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಮೂಡಿದೆ.
ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿ ಹಾಗೂ ಮಕ್ಕಳ ದೇಹ ಇಂದು ಕೆರೆಯಲ್ಲಿ ತೇಲಾಡಿದ್ದು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂರು ಮೃತದೇಹಗಳನ್ನ ಹೊರತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹೆಂಡತಿ ಮಕ್ಕಳನ್ನ ಕಳೆದುಕೊಂಡ ಗಂಡ ಜಯಣ್ಣ ರೋಧಿಸುವಂತಾಗಿದೆ.