ಶಿರಾಡಿ ಘಾಟ್ನಲ್ಲಿ ಭೀಕರ ಅಪಘಾತ: 40 ಅಡಿ ಆಳದ ಹೊಳೆಗೆ ಇಳಿದ ಕಾರ್; ಒಂದೇ ಕುಟುಂಬದ ನಾಲ್ವರು ಪವಾಡ ರೀತಿಯಲ್ಲಿ ಪಾರು!

ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್ನಲ್ಲಿ ರಸ್ತೆಬದಿಯ ಹೊಳೆಗೆ ಕಾರ್ ಬಿದ್ದಿದೆ. ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ನಲ್ಲಿ ಈ ಘಟನೆ ನಡೆದಿದ್ದು, 40 ಅಡಿ ಎತ್ತರದಿಂದ ಕಾರ್ ಹೊಳೆಗೆ ಇಳಿದ್ರೂ ಎಲ್ಲರೂ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಕಾರಿನಲ್ಲಿ ಗೋವಿಂದ್, ಪತ್ನಿ ಆಶಾ ಮಕ್ಕಳಾದ ಹರ್ಷಿತ್, ವರ್ಷಿತ್ ನಾಲ್ವರು ಮಂಗಳೂರಿಗೆ ತೆರಳುತ್ತಿದ್ದರು.
ಬುದಕುಳಿದ ಪ್ರಯಾಣಿಕರು
ಗೋವಿಂದ್ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ನಿವಾಸಿಗಳಾಗಿದ್ದು, ಕುಟುಂಬ ಸಮೇತರಾಗಿ ಮಂಗಳೂರಿಗೆ ತೆರಳುತ್ತಿದ್ರು. ಕಾರ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಳೆಗಾಲ ಮತ್ತು ಚಳಿಗಾಲ ಸಂದರ್ಭದಲ್ಲಿ ಮಂಜಿನಿಂದಾಗಿ ಗೋಚರತೆ ಕಡಿಮೆ ಇರುತ್ತದೆ. ದಟ್ಟ ಮಂಜಿನಿಂದ ರಸ್ತೆ ಕಾಣದೇ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿರುತ್ತವೆ.
ಎಲ್ಲಿದೆ ಈ ಶಿರಾಡಿ?
ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು – ಬೆಂಗಳೂರು ನಗರಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಶಿರಾಡಿ ಗ್ರಾಮದಲ್ಲಿನ ಮಾರ್ಗ ಅಂಕುಡೊಂಕಾಗಿದೆ. ಈ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಮೂಲಕ ಹಾದುಹೋಗುತ್ತದೆ.