ಆಪರೇಷನ್ ಸಿಂದೂರದ ಹೀರೋ – ಬೆಂಗಳೂರಿನ ಬಿಇಎಲ್ ನಿರ್ಮಿತ ಆಕಾಶತೀರ್ ಶ್ಲಾಘನೆಗೆ ಪಾತ್ರ

ಬೆಂಗಳೂರು: ಆಪರೇಷನ್ ಸಿಂದೂರದಲ್ಲಿ ಭಾರತದ ದೈತ್ಯ ಮಿಲಿಟರಿ ಶಕ್ತಿ ಎಲ್ಲರ ಕಣ್ಕುಕ್ಕಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಡಿಫೆನ್ಸ್ ಸಿಸ್ಟಂ, ಫೈಟರ್ ಜೆಟ್ಗಳಿಂದ ಹಿಡಿದು ದೇಶೀಯವಾಗಿ ಅಭಿವೃದ್ಧಿಯಾದ ಡ್ರೋನ್, ಮಿಸೈಲ್ ಇತ್ಯಾದಿವರೆಗೂ ಭಾರತ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಮೇ 7ರಿಂದ 10ರವರೆಗೆ ನಡೆದ ನಾಲ್ಕು ದಿನ ಸಂಘರ್ಷದಲ್ಲಿ ಹೈಲೈಟ್ ಆಗಿದ್ದು ಭಾರತದ ಅಭೇದ್ಯ ರಕ್ಷಣಾ ಕೋಟೆ. ಈ ಕೋಟೆಯ ಒಂದು ಪ್ರಮುಖ ಭಾಗವಾದ ಆಕಾಶತೀರ ಬಗ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಆಕಾಶತೀರ್ ಎಂಬುದು ಬೆಂಗಳೂರಿನ ಬಿಇಎಲ್ ಸಂಸ್ಥೆ ನಿರ್ಮಿಸಿದ ಏರ್ ಡಿಫೆನ್ಸ್ ಸಿಸ್ಟಂ. ಪಾಕಿಸ್ತಾನ ಹಾರಿಬಿಟ್ಟ ನೂರಾರು ಡ್ರೋನ್, ಮಿಸೈಲ್, ಸಣ್ಣ ಯುಎವಿ, ಲಾಯ್ಟರಿಂಗ್ ಮ್ಯುನಿಶನ್ ಇತ್ಯಾದಿ ಅಸ್ತ್ರಗಳನ್ನು ಸಮರ್ಥವಾಗಿ ಗುರುತಿಸಿ ಹೊಡೆದುರಳಿಸಲು ಯಶಸ್ವಿಯಾಗಿತ್ತು ಭಾರತದ ವಿವಿಧ ಎಳೆಗಳ ರಕ್ಷಣಾ ವ್ಯವಸ್ಥೆ. ಬೇರೆ ಬೇರೆ ಡಿಫೆನ್ಸ್ ಸಿಸ್ಟಂಗಳನ್ನು ಸರಿಯಾಗಿ ಸಂಯೋಜಿಸಿದ್ದು ಆಕಾಶ್ತೀರ್.
ಏರ್ಡಿಫೆನ್ಸ್ ಸಿಸ್ಟಂನಲ್ಲಿ ಕ್ಷಿಪಣಿ, ರಾಡಾರ್ ಇತ್ಯಾದಿಗಳನ್ನು ನೀವು ಹಾರ್ಡ್ವೇರ್ ಎನ್ನುವುದಾದರೆ, ಆಕಾಶತೀರವನ್ನು ಸಾಫ್ಟ್ವೇರ್ಗೆ ಹೋಲಿಸಬಹುದು. ಎದುರಾಳಿಗಳಿಂದ ಬಂದ ವಸ್ತುಗಳನ್ನು ಗುರುತಿಸಿ, ಅದು ಯಾವ್ಯಾವುವು, ಎಲ್ಲಿಂದ ಬಂದಿದೆ, ಎಲ್ಲಿಗೆ ಹೋಗುತ್ತಿವೆ, ಅವುಗಳನ್ನು ಯಾವುದರಿಂದ ಹೊಡೆಯಬೇಕು ಇತ್ಯಾದಿ ಎಲ್ಲವನ್ನೂ ರಿಯಲ್ ಟೈಮ್ನಲ್ಲಿ ತೋರಿಸಬಲ್ಲಂತಹ ಒಂದು ಸಿಸ್ಟಂ ಆಕಾಶತೀರ. ಸರ್ವೇಲೆನ್ಸ್ ಸೆಟಿಲೈಟ್, ರಾಡಾರ್, ಕಮಾಂಡ್ ಯೂನಿಟ್ಗಳ ಒಂದು ಸಂಯೋಜಿತ ನೆಟ್ವರ್ಕ್ ಅನ್ನು ಹೊಂದಿರುವ ಆಕಾಶತೀರವು, ಭಾರತದ ಡಿಫೆನ್ಸ್ ಆಪರೇಷನ್ಸ್ಗೆ ದಾರಿದೀಪದಂತೆ ಕೆಲಸ ಮಾಡುತ್ತದೆ.
ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯು ಆಕಾಶತೀರವನ್ನು ತಯಾರಿಸಿರುವುದು ಬೆಂಗಳೂರಿಗೆ ಹೆಮ್ಮೆ ತರುವ ಸಂಸಗತಿ. ಸಂಪೂರ್ಣ ಸ್ವಂತವಾಗಿ ಇದನ್ನು ತಯಾರಿಸಿರುವುದು ಇನ್ನೂ ಖುಷಿಯ ಸಂಗತಿ.
2023ರಲ್ಲಿ ಡಿಫೆನ್ಸ್ ಸಚಿವಾಲಯವು 455 ಆಕಾಶತೀರ ಯುನಿಟ್ಗಳ ತಯಾರಿಕೆಗೆ ಬಿಇಎಲ್ಗೆ ಗುತ್ತಿಗೆ ನೀಡಿತ್ತು. 2024ರ ನವೆಂಬರ್ವರೆಗೆ 107 ಯುನಿಟ್ಗಳನ್ನು ಸೇನೆಗೆ ಕೊಡಲಾಗಿದೆ. ಇನ್ನೆರಡು ವರ್ಷದಲ್ಲಿ ಎಲ್ಲಾ 455 ಯುನಿಟ್ಗಳನ್ನು ಕೊಡಬಹುದು. ಈಗ ತುರ್ತು ಸಂದರ್ಭವಾದ್ದರಿಂದ ಇನ್ನೂ ಬೇಗ ಹೆಚ್ಚೆಚ್ಚು ಆಕಾಶತೀರ್ ಘಟಕಗಳನ್ನು ತಯಾರಿಸಿಕೊಡಲು ಬಿಇಎಲ್ ಮುಂದಾಗಬಹುದು.