ಕಾರವಾರ-ಉತ್ತರ ಕನ್ನಡದಲ್ಲಿ ಭಾರೀ ಮಳೆಯ ಅಬ್ಬರ: ರಸ್ತೆ ಜಲಾವೃತ, ಮನೆ ಗೋಡೆ ಕುಸಿತ, ಸಂಚಾರ ವ್ಯತ್ಯಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಹಲವು ಕಡೆ ಅವಾಂತರ ಸೃಷ್ಟಿ ಮಾಡಿದೆ.

ಕುಮಟಾ ತಾಲೂಕಿನ ಗೋಕರ್ಣ, ಮಾದನಗೇರಿಯಲ್ಲಿ ರಾಜ್ಯ ಹೆದ್ದಾರಿ 143 ರಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆ ಜಲಾವೃತವಾಗಿ ಹಲವು ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದ್ದು, ನಷ್ಟ ತಂದೊಡ್ಡಿದೆ. ಇನ್ನು ಮಾದನಗೇರಿ, ಗೋಕರ್ಣ ಭಾಗದ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸವಾರರು ಪರದಾಡುವಂತಾಗಿದೆ.
ಹೊನ್ನಾವರದಲ್ಲಿ ಲಿಂಗನಮಕ್ಕಿ ಹಾಗೂ ಗೇರುಸೊಪ್ಪದ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ನದಿಪಾತ್ರದ ತೋಟಗಳಿಗೆ ನೀರು ನುಗ್ಗಿದೆ. ಹೊನ್ನಾವರದ ಕರ್ನಲ್ ಕಂಬದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡದಲ್ಲಿ ಸಣ್ಣ ಪ್ರಮಾಣದ ಕುಸಿದು ರಸ್ತೆಗೆ ಬಿದ್ದಿದೆ. ಪರಿಣಾಮ ಕೆಲವು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.
ಕಾರವಾರದಲ್ಲಿ ಸುರಿದ ಮಳೆಗೆ ಕೋಡಿಬಾಗ್ನ ವಿಜಯಾ ಪಾಲೇಕರ್ ಎಂಬವರ ಮನೆಯ ಗೋಡೆ ಕುಸಿತವಾಗಿ ಹಾನಿಯಾಗಿದೆ.