ಭಾರೀ ಮಳೆ: ಸಂಚಾರಕ್ಕೆ ಅಡೆತಡೆ, ಮರ ಬಿದ್ದು ರಸ್ತೆ ಬಂದ್

ಬೆಂಗಳೂರು: ಎರಡ್ಮೂರು ದಿನಗಳಿಂದ ಬೆಂಗಳೂರಿನದಾದ್ಯಂತ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಇನ್ನು ಅನೇಕ ರಸ್ತೆಗಳಲ್ಲಿ ಮರಗಳು ಬಿದ್ದ ಪರಿಣಾಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಬಿಬಿಎಂಪಿ ಹಾಗೂ ಬೆಂಗಳೂರು ಸಂಚಾರ ಪೊಲೀಸರು ತ್ವರಿತಗತಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರೂ ಅನೇಕ ರಸ್ತೆಗಳಲ್ಲಿ ಬುಧವಾರ ಮುಂಜಾನೆಯೂ ನಿಧಾನಗತಿಯ ಸಂಚಾರ ಮುಂದುವರಿದಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಎಕ್ಸ್ ತಾಣದಲ್ಲಿ ಸಂದೇಶಗಳನ್ನು ಪ್ರಕಟಿಸುವ ಮೂಲಕ ಮಾಹಿತಿ ನೀಡಿದ್ದಾರೆ.
ನಮನ ಜಕ್ಷನ್ ಹತ್ತಿರ ಮರಬಿದ್ದಿರುವುದರಿಂದ ಕೋಡಿಚಿಕ್ಕನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಟೋಲ್ ಗೇಟ್ ಎಂಸಿ ಸರ್ಕಲ್ ಹತ್ತಿರ ಮರಬಿದ್ದಿರುವುದರಿಂದ ಚೋಳರಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಾಳೇಕುಂದ್ರಿ ಜಕ್ಷನ್ ರಸ್ತೆ ತಾತ್ಕಾಲಿಕ ಬಂದ್
ಬಾಳೇಕುಂದ್ರಿ ಜಕ್ಷನ್ ಹತ್ತಿರ ಮರ ಬಿದ್ದಿರುವುದರಿಂದ ಚಂದ್ರಿಕಾ ಹೊಟೇಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಈ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವೀಟ್
ರಸ್ತೆ ಹದಗೆಟ್ಟಿರುವ ಕಾರಣ ಹಗದೂರು ಜಂಕ್ಷನ್ನಿಂದ ಹಗದೂರು ಗ್ರಾಮದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ಮಂಗಳವಾರ ರಾತ್ರಿ ತಿಳಿಸಿದ್ದರು. ಈ ರಸ್ತೆಯಲ್ಲಿ ಬುಧವಾರವೂ ಇಡೀ ದಿನ ನಿಧಾನಗತಿಯ ಸಂಚಾರ ನಿರೀಕ್ಷಿಸಲಾಗಿದೆ.
ಇಷ್ಟೇ ಅಲ್ಲದೆ, ಬೆಂಗಳೂರಿನ ಇನ್ನೂ ಅನೇಕ ರಸ್ತೆಗಳಲ್ಲಿ ಹೊಂಡ-ಗುಂಡಿ ಸಮಸ್ಯೆ, ಮರಬಿದ್ದಿರುವುದು ಮತ್ತು ಇತರ ಕಾರಣಗಳಿಂದ ಇಂದೂ ಸಹ ಸಂಚಾರಕ್ಕೆ ಅಡಚಣೆ ಅಥವಾ ನಿಧಾನಗತಿಯ ಸಂಚಾರದ ಸಾಧ್ಯತೆ ಇದೆ.