ಮುಗಿಯದ ವಾಗ್ವಾದ: ಟಿಪ್ಪರ್ ಚಾಲಕರಿಂದ ಬಸ್ ಚಾಲಕನಿಗೆ ಹಲ್ಲೆ

ಉಳ್ಳಾಲ: ಕೈರಂಗಳದಲ್ಲಿ ದಾರಿ ಬಿಡುವುದಕ್ಕೆ ಸಂಬಂಧಿಸಿ ಬಸ್ ಚಾಲಕ ಹಾಗೂ ಟಿಪ್ಪರ್ ಚಾಲಕನ ನಡುವೆ ಬುಧವಾರ ಬೆಳಿಗ್ಗೆ ವಾಗ್ವಾದ ನಡೆದಿದ್ದು, ಆಗಂತುಕರಿಬ್ಬರು ಬಸ್ ಚಾಲಕನಿಗೆ ಮುಡಿಪುವಿನಲ್ಲಿ ಸಂಜೆ ಹಲ್ಲೆ ನಡೆಸಿದ್ದಾರೆ.
ಮುಡಿಪು- ಮಂಗಳೂರು ನಡುವೆ ಚಲಿಸುವ ಗೋಪಾಲಕೃಷ್ಣ ಟ್ರಾವೆಲ್ಸ್ ಬಸ್ ಚಾಲಕ ತ್ಯಾಗರಾಜ್ ಹಲ್ಲೆಗೊಳಗಾದವರು.
ಅವರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಡಿಪು ಜಂಕ್ಷನ್ನಲ್ಲಿ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆಗಂತುಕರಿಬ್ಬರು ಬಂದು ಚಾಲಕನನ್ನು ಹೊರಗೆಳೆದು ಹಲ್ಲೆ ನಡೆಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಕೈರಂಗಳ ಪುಣ್ಯಕೋಟಿ ನಗರ ಸಮೀಪದ ಬಸ್ ನಿಲ್ದಾಣದಲ್ಲಿ ಬಸ್ ನಿಂತಿದ್ದಾಗ ಒಳರಸ್ತೆಯಿಂದ ಬಂದ ಟಿಪ್ಪರ್ ಲಾರಿಯ ಚಾಲಕ ದಾರಿ ಬಿಡುವಂತೆ ಹಾರ್ನ್ ಹಾಕಿದ್ದರು. ಆದರೆ ಬಸ್ ಚಾಲಕ ಟಿಪ್ಪರ್ ಲಾರಿಗೆ ದಾರಿ ಬಿಟ್ಟುಕೊಡದೇ ಕೆಲ ಸಮಯ ಬಸ್ ಅನ್ನು ಹಾಗೆಯೇ ನಿಲ್ಲಿಸಿದ್ದರು. ಇದು ಟಿಪ್ಪರ್ ಚಾಲಕ-ಬಸ್ ಚಾಲಕನ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.