ಪ್ರೀತಿಯ ಹೆಸರಿನಲ್ಲಿ ಕಿರುಕುಳ; ಚಿಂತಾಮಣಿಯಲ್ಲಿ ಯುವಕನ ದುರಂತ ಅಂತ್ಯ, ಮಹಿಳೆ ವಿರುದ್ಧ ದೂರು ದಾಖಲು!

ಚಿಕ್ಕಬಳ್ಳಾಪುರ : ಮಹಿಳೆಯ ಕಾಟ ತಾಳಲಾರದೆ ಯುವಕ ನೇಣಿಗೆ ಶರಣಾಗಿರುವ ಘಟನೆ ಮೂಡಚಿಂತನಹಳ್ಳಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಡಚಿಂತನಹಳ್ಳಿಯಲ್ಲಿ ನಿಖಿಲ್ ಕುಮಾರ್ (19) ಆತ್ಮಹತ್ಯೆಗೆ ಶರಣಾಗಿರುವ ಯುವಕ ಎಂದು ತಿಳಿದುಬಂದಿದೆ.

38 ವರ್ಷದ ಶಾರದಾ ಜೊತೆಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದ ಎನ್ನುವ ಆರೋಪ ಕೇಳಿ ಬಂದಿದ್ದು, ಪೋಷಕರ ವಿರೋಧದ ನಡುವೆಯೂ ಕೂಡ ಶಾರದಾ ಯುವಕನನ್ನು ಬಿಟ್ಟಿರಲಿಲ್ಲ. ಪೋಷಕರ ಕಣ್ತಪ್ಪಿಸಿ ಯುವಕನನ್ನು ಶಾರದ ಹೊರಗಡೆ ಕರೆದುಕೊಂಡು ಹೋಗುತ್ತಿದ್ದಳು. ಹಲವು ವರ್ಷಗಳ ಹಿಂದೆ ಶಾರದಾ ಗಂಡನಿಗೆ ವಿಚ್ಚೇದನ ನೀಡಿದ್ದಾಳೆ.
ಇಬ್ಬರು ಮಕ್ಕಳೊಂದಿಗೆ ಶಾರದಾ ಮೂಡಚಿಂತನಹಳ್ಳಿಯಲ್ಲಿ ವಾಸವಿದ್ದಾಳೆ. ಇದೀಗ ಕೆರೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಶಾರದಾ ವಿರುದ್ಧ ಮೃತ ಯುವಕನ ಪೋಷಕರು ಉದುರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.