ದಂಪತಿ ನಾಪತ್ತೆ ಪ್ರಕರಣ ಸುಖಾಂತ್ಯ: ಆರೋಪಿಗಳ ಬಂಧನ.

ಚಾಮರಾಜನಗರ: ಜಿಲ್ಲೆಯ ಬಂಡೀಪುರದಲ್ಲಿ ನಡೆದಿದ್ದ ಅಪಹರಣ ಪ್ರಕರಣವನ್ನು 24ಗಂಟೆಯೊಳಗೆ ಭೇದಿಸಿರುವ ಪೊಲೀಸರು ವಿಜಯಪುರದ ತೋಟದ ಮನೆಯೊಂದರಲ್ಲಿ ದಂಪತಿ ಮತ್ತು ಮಗುವನ್ನು ರಕ್ಷಣೆ ಮಾಡುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ತಲೆಮರೆಸಿಕೊಂಡಿರುವ ಮೂವರ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಕರಣದ ಕುರಿತು ಎಸ್ಪಿ ಡಾ.ಬಿ.ಟಿ.ಕವಿತಾ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದು, ಅದರಂತೆ ಚಾಮರಾಜನಗರ ಜಿಲ್ಲೆಯ ಬಂಡೀಪುರದ ಬಳಿ ಅಪಹರಣಕ್ಕೆ ಒಳಗಾಗಿದ್ದ ಮೂಲತಃ ದಾವಣಗೆರೆ ಚನ್ನಗಿರಿಯ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ನಿಶಾಂತ್, ಪತ್ನಿ ಚಂದನ ಮತ್ತು 7 ವರ್ಷದ ಗಂಡು ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಆರೋಪಿಗಳಾದ ಕೋಲಾರದ ಮಲ್ಲಿಕಾರ್ಜುನ(30), ಯಾದಗಿರಿಯ ಈರಣ್ಣ (32), ಸಿದ್ದರಾಮಯ್ಯ(40), ವಿಜಯಪುರದ ವಿಶ್ವನಾಥ(30) ಅವರನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಬಾಗಲಕೋಟೆಯ ಪುನೀತಾ, ಸ್ನೇಹಿತ್, ಭೀಮನಗೌಡ ಬಂಧನಕ್ಕಾಗಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
ಅಪಹರಣಕ್ಕೆ ಕಾರಣ ಏನು ಎಂಬುದನ್ನು ನೋಡಿದ್ದೇ ಆದರೆ ತಲೆಮರೆಸಿಕೊಂಡಿರುವ ಪುನೀತ್ ಬಳಿ ನಿಶಾಂತ್ ಹಣ ಪಡೆದಿದ್ದ. ವಾಪಸ್ ಕೊಡದೆ ಇದ್ದ ಹಿನ್ನೆಲೆ ಕುಟುಂಬ ಬಂಡೀಪುರಕ್ಕೆ ಬಂದಿದ್ದಾಗ ಅಪಹರಣ ಮಾಡಿ ವಿಜಯಪುರದ ಸಿಂಧಗಿ ತಾಲೂಕಿನ ಹೊನ್ನಹಳ್ಳಿಯ ತೋಟಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಅಪಹರಣಕ್ಕೂ ಮೊದಲೇ ನಿಶಾಂತ್ ಉಳಿದುಕೊಂಡಿದ್ದ ರೆಸಾರ್ಟ್ಗೆ ಮಲ್ಲಿಕಾರ್ಜುನ ಬಂದು ರೂಂ ಕೇಳಿದ್ದ. ಈ ವೇಳೆ ಆತ ತಂದಿದ್ದ ಕಾರನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಗಮನಿಸಿ ನಂಬರ್ ಪರಿಶೀಲನೆ ಮಾಡಿಸಿ ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಬಂಡೀಪುರಕ್ಕೆ ಬಂದಿದ್ದ ಬೆಂಗಳೂರು ಮೂಲದ ಜೆ.ನಿಶಾಂತ್, ಪತ್ನಿ ಚಂದನಾ ಮತ್ತು ಮಗನೊಂದಿಗೆ ಕುಟುಂಬವು ಬಂಡೀಪುರ ಬಳಿಯ ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ಭಾನುವಾರ (ಮಾ.02) ರಾತ್ರಿ ತಂಗಿದ್ದರು. ಕಂಟ್ರಿ ಕ್ಲಬ್ ರೆಸಾಟ್ ನಲ್ಲಿ ಲಗೇಜ್ ಬಿಟ್ಟು ನಿಶಾಂತ್ ಕುಟುಂಬವು ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಕಾರಿನಲ್ಲಿ ಬಂಡೀಪುರ ಮಂಗಲ ರಸ್ತೆಯವರೆಗೆ ಹೋದವರು, ಅಲ್ಲಿಂದ ನಾಪತ್ತೆಯಾಗಿದ್ದರು.
ಬೆಂಗಳೂರು ಮೂಲದ ಕುಟುಂಬ ನಾಪತ್ತೆಯಾದ ವಿಷಯ ತಿಳಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಡುಕಾಟಕಕಾಗಿ ಪೊಲೀಸ್ ಸಿಬ್ಬಂದಿ ಕಳುಹಿಸಿದ್ದರು. ಈ ಸಂಬಂಧವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ನಾಪತ್ತೆಯಾಗಿರುವ ನಿಶಾಂತ್ ಬಿಬಿಎಂಪಿ ನೌಕರ ಎಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ನೀಡಿ ರೂಮ್ ಬುಕ್ ಮಾಡಿದ್ದನು. ಜೊತೆಗೆ ನಿಶಾಂತ್ ಸಾಲ ಮಾಡಿಕೊಂಡಿದ್ದನು. ನಿಶಾಂತ್ ಸದ್ಯ ಯಾವುದೇ ಕೆಲಸ ಕಾರ್ಯ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ನಿಶಾಂತ್ ಸಾಲಗಾರರಿಗೆ ಹೆದರಿ ಕುಟುಂಬದ ಸಮೇತರಾಗಿ ಬಂಡೀಪುರಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ನಡುವೆ ನಿಶಾಂತ್ ಅವರ ಚಲನ ವಲನ ಸೂಕ್ಷ್ಮವಾಗಿ ಗಮನಿಸಿದ ಸಾಲಗಾರರೇ ಅಪಹರಿಸಿರುವ ಶಂಕೆಯಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ನಿಶಾಂತ್ ಉಳಿದುಕೊಂಡಿದ್ದ ರೆಸಾರ್ಟ್ ಗೆ ಮಲ್ಲಿಕಾರ್ಜುನ ಬಂದು ರೂಂ ಕೇಳಿದ್ದ. ಈ ವೇಳೆ ಆತ ತಂದಿದ್ದ ಕಾರನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಗಮನಿಸಿ ನಂಬರ್ ಪರಿಶೀಲನೆ ಮಾಡಿಸಿ ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.