Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೂದಲು-ಉಗುರು ಉದುರುವಿಕೆ ರೋಗ:ಸರ್ಕಾರದ ಗೋಧಿಯಿಂದ ಮಹಾರಾಷ್ಟ್ರದಲ್ಲಿ ವಿಷಕಾರಿ ಪರಿಣಾಮ?

Spread the love

ಮಹಾರಾಷ್ಟ್ರ:ಕೆಲ ತಿಂಗಳುಗಳಿಂದ ಭಯಾನಕ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಊರ ಮಂದಿಯ ತಲೆಗೂದಲು ಉದುರು ಬೋಳಾಗುತ್ತಿದೆ. ಕೈ-ಕಾಲುಗಳ ಉಗುರುಗಳು ಉದುರಿ ಹೋಗುತ್ತಿವೆ. ಈ ಕಾಯಿಲೆ ಅಕ್ಕಪಕ್ಕದ ಊರುಗಳಿಗೂ ಹರಡುತ್ತಿದ್ದು, ಜನರು ಭಯಭೀತಗೊಂಡಿದ್ದಾರೆ! ಇಂಥದ್ದೊಂದು ಆಘಾತಕಾರಿ ಘಟನೆ ನಡೆಯುತ್ತಿರುವುದು ಮಹಾರಾಷ್ಟ್ರದಲ್ಲಿ. ಕಳೆದ ಡಿಸೆಂಬರ್​ನಿಂದ ಆರಂಭವಾಗಿರುವ ಕೂದಲು ಉದುರುವಿಕೆ ಇಂದಿಗೂ ಮುಂದುವರೆದಿದ್ದು, ಇದೀಗ ಉಗುರುಗಳಿಗೂ ಸಂಕಷ್ಟ ಎದುರಾಗಿದೆ!  ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಶೇಗಾಂವ್‌ನ ಹಲವಾರು ಹಳ್ಳಿಗಳಲ್ಲಿ ಕಾಣಿಸಿಕೊಂಡಿರೋ ಈ ಗಂಭೀರ ಕಾಯಿಲೆಯು ಪಕ್ಕದ ಊರುಗಳಿಗೂ ಹರಡುತ್ತಿದೆ. ಕಳೆದ ಡಿಸೆಂಬರ್​ನಲ್ಲಿ,  ಬಾಂಡ್‌ಗಾಂವ್ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ  300ಕ್ಕೂ ಅಧಿಕ ಜನರಿಗೆ  ಏಕಾಏಕಿ ಕೂದಲು ಉದುರಲು ಆರಂಭವಾಗಿತ್ತು. ಜನರು ಇದನ್ನು ಆರಂಭದಲ್ಲಿ ಅಷ್ಟು ಸೀರಿಯಸ್​ ಆಗಿ ತೆಗೆದುಕೊಂಡಿರಲಿಲ್ಲ. ಬರಬರುತ್ತಾ ಇದು ಸುದ್ದಿಯಾಯಿತು.  ಕೊನೆಗೆ ಬಹುತೇಕ ಜನರ ಕೂದಲು ಉದುರುತ್ತಾ ತಲೆ ಬೋಳಾಯಿತು. 

ಈ ಸಮಸ್ಯೆಯಿಂದ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲಿಯೇ ಇದೀಗ ಹಲವಾರು ಗ್ರಾಮಗಳ ಜನರ ಉಗುರುಗಳಿಗೆ ಸಮಸ್ಯೆ ಆರಂಭವಾಗಿದೆ. ಕೈ ಕಾಲುಗಳ ಉಗುರುಗಳು ಏಕಾಏಕಿಯಾಗಿ ಉದುರಲು ಶುರುವಾಗಿದೆ. ಇದೀಗ ಜನರು ಭಯದಿಂದ ಬದುಕುವಂತಾಗಿದೆ. ಸದ್ಯ ಇದರ ಬಗ್ಗೆ ತನಿಖೆ ಶುರುವಾಗಿದೆ. ಆದರೆ ಆತಂಕಕಾರಿ ವಿಷಯ ಏನೆಂದರೆ, ಹೆಚ್ಚುವರಿ ಸೆಲೆನಿಯಮ್ ಈ ಕಾಯಿಲೆಗೆ ಕಾರಣ ಎನ್ನುವುದು ಮೇಲ್ನೋಟದ ತನಿಖೆಯಿಂದ ಕಂಡುಬಂದಿದೆ. ಮಹಾರಾಷ್ಟ್ರಕ್ಕೆ ಪೂರೈಕೆ ಆಗುತ್ತಿರುವ ಪಂಜಾಬ್ ಮತ್ತು ಹರಿಯಾಣದಿಂದ ಈ ಗ್ರಾಮಗಳಿಗೆ ಕಳುಹಿಸಲಾದ ಗೋಧಿಯಲ್ಲಿ ಸ್ಥಳೀಯ ಗೋಧಿಗಿಂತ 600 ಪಟ್ಟು ಹೆಚ್ಚಿನ ಸೆಲೆನಿಯಮ್ ಮಟ್ಟವಿರುವುದು ಪತ್ತೆಯಾಗಿದೆ. ಇದೇ ಕಾರಣಕ್ಕೆ, ಇಂಥ ಸಮಸ್ಯೆ ಉದ್ಭವ ಆಗಿದೆ ಎನ್ನಲಾಗಿದೆ. 

ಪ್ರಾಥಮಿಕ ತನಿಖೆಯಲ್ಲಿ 29 ಜನರಲ್ಲಿ ಉಗುರು ಬಿದ್ದು ವಿರೂಪಗೊಂಡಿರುವುದು ದೃಢಪಟ್ಟಿದೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಪರೀಕ್ಷೆಗಾಗಿ ಶೇಗಾಂವ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸೆಲೆನಿಯಮ್ ಎನ್ನುವುದು ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿದ್ದರೆ ಪ್ರಯೋಜನಕಾರಿಯಾಗಿದೆ. ಆದರೆ ಅದು ಅಧಿಕವಾದರೆ ಹಾನಿಕಾರಕವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮೋಲ್ ಗೀತೆ ತಿಳಿಸಿದ್ದಾರೆ.  ಸೆಲೆನಿಯಂ ಮಟ್ಟ ಹೆಚ್ಚಾಗುವುದು ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣವಾಗಿರಬಹುದು ಎನ್ನುವುದು ಸದ್ಯ ತಿಳಿದಿರುವ ವಿಷಯವಾಗಿದ್ದು,  ಇದರಿಂದಾಗಿ ಜನರನ್ನು ವಿಶೇಷ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.  ಇತ್ತೀಚಿನ ಕಾಯಿಲೆಯ ಮೂಲ ಕಾರಣ ಸ್ಪಷ್ಟವಾಗಿಲ್ಲವಾದರೂ, ಪರಿಸರ ಮಾಲಿನ್ಯ ಮತ್ತು ನೀರಿನ ಮಾಲಿನ್ಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. 

ಆದರೆ ಇದು ಗೋಧಿಯಿಂದ ಆಗಿರಬಹುದು ಎನ್ನುವುದು ಬಹುತೇಕ ಅಭಿಮತ.  ಶೇಗಾಂವ್ ಬಳಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ. ಸಂಜಯ್ ಮಹಾಜನ್, “ದೇಹದಲ್ಲಿ ಸೆಲೆನೋಸಿಸ್ ಎಂದು ಕರೆಯಲ್ಪಡುವ ಹೆಚ್ಚಿನ ಸೆಲೆನಿಯಮ್ ಮಟ್ಟಗಳು ಉಗುರು ಮತ್ತು ಕೂದಲು ಉದುರುವಿಕೆ, ಚರ್ಮ ಸಿಪ್ಪೆ ಸುಲಿಯುವುದು, ಆಯಾಸ ಮತ್ತು ನರವೈಜ್ಞಾನಿಕ ಸಮಸ್ಯೆಗಳಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಶಿಫಾರಸು ಮಾಡಲಾದ ದೈನಂದಿನ ಸೆಲೆನಿಯಮ್ ಸೇವನೆಯು ಸುಮಾರು 55 ಮೈಕ್ರೋಗ್ರಾಂಗಳು. 400 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಸೇವಿಸುವುದು ವಿಷಕಾರಿಯಾಗಬಹುದು. ರೋಗಲಕ್ಷಣಗಳನ್ನು ಅನುಭವಿಸುವ ಯಾರಾದರೂ ವೈದ್ಯರನ್ನು ಸಂಪರ್ಕಿಸಿ ಸೆಲೆನಿಯಮ್ ಮಟ್ಟವನ್ನು ಪರೀಕ್ಷಿಸಲು ಪರೀಕ್ಷೆಗೆ ಒಳಗಾಗಬೇಕು” ಎಂದು ಅವರು ತಿಳಿಸಿದ್ದಾರೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯಿಂದ ಇದು ವೈರಸ್ ಅಲ್ಲದಿರಬಹುದು ಆದರೆ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿರುವ ಸೆಲೆನಿಯಮ್ ವಿಷತ್ವದ ಪ್ರಕರಣವಾಗಿರಬಹುದು ಎಂದು ಹೇಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *