Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಸುರಕ್ಷಿತ ಔಷಧ ಮಾರಾಟ ನಿಷೇಧಿಸಲು ಗುಂಡೂರಾವ್ ಕೇಂದ್ರಕ್ಕೆ ಮನವಿ

Spread the love

ಬೆಂಗಳೂರು : ಅಸುರಕ್ಷಿತ ಎನಿಸಿದ ಹಾಗೂ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿರುವ ಕಂಪನಿಗಳ ಔಷಧ ಮಾರಾಟವನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಈ ಕುರಿತು ನಡ್ಡಾರಿಗೆ ಔಷಧ ಕಂಪನಿಗಳ ಅಸುರಕ್ಷಿತ ಔಷಧ ವಿವರಗಳನ್ನು ಉಲ್ಲೇಖಿಸಿ ಫೆ.20 ರಂದು ಪತ್ರ ಬರೆದಿದ್ದಾರೆ. ಜನವರಿ 1 ರಿಂದ ಫೆಬ್ರವರಿ 16 ರವರೆಗೆ 9 ಕಂಪನಿಗಳು ಉತ್ಪಾದಿಸುವ ಡ್ರಗ್ಸ್ ಬಗ್ಗೆ ರಾಜ್ಯ ಸರ್ಕಾರವು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅವು ಬಳಕೆಗೆ ಯೋಗ್ಯವಲ್ಲವೆಂದು ಕಂಡುಬದಿದೆ. ಪರೀಕ್ಷೆಯಲ್ಲಿ ಆ ಕಂಪನಿಗಳ ಉತ್ಪಾದನೆಯ ಡ್ರಗ್ ಇರುವ ಇಂಜೆಕ್ಷನ್ ಔಷಧ ಗುಣಮಟ್ಟದ್ದಲ್ಲವೆಂದು ದೃಢಪಟ್ಟಿದೆ.

ತಕ್ಷಣ ಕೇಂದ್ರ ಸರ್ಕಾರ ಈ ಕಂಪನಿಗಳು ಮಾರಾಟ ಮಾಡುವ ಬಳಕೆಗೆ ಯೋಗ್ಯವಲ್ಲದ ಔಷಧಗಳನ್ನು ತನ್ನ ಅಧೀನದ ಲ್ಯಾಬ್‌ಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಟ್ರೋಲ್ ಆರ್ಗನೈಸೇಷನ್ ಪ್ರಯೋಗಾಲಯದಲ್ಲಿ9 ಔಷಧ ಕಂಪನಿಗಳು ಉತ್ಪಾದಿಸುವ ಔಷಧಗಳನ್ನು ಟೆಸ್ಟ್ ಮಾಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟವನ್ನು ನಿರ್ಬಂಧಿಸಬೇಕು. ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ, ಅವುಗಳನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
9 ಇಂಜೆಕ್ಷನ್‌ಗಳು ಯಾವುವು?
ದೋಷಪೂರಿತ 9 ಕಂಪನಿಗಳ ಚುಚ್ಚುಮದ್ದು ಮೂಲಕ ನೀಡುವ ಔಷಧಗಳ ವಿವಿಧ ಬ್ಯಾಚ್‌ಗಳನ್ನು ನಮೂದಿಸಿ ಇವುಗಳನ್ನು ನಿಷೇಧಿಸುವಂತೆ ಸಚಿವ ಗುಂಡೂರಾವ್ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಫಾರ್ಮಾ ಇಂಪೆಕ್ಸ್ ಲ್ಯಾಬೊರೆಟರಿಸ್ ಪ್ರೈವೇಟ್ ಲಿಮಿಟೆಡ್‌ನ ಮೆಟ್ರೊನಿಡಾಜೊಲ್ ಇಂಜೆಕ್ಷನ್, ಅಲ್ಪಾ ಲ್ಯಾಬೊರೆಟರಿಸ್‌ನ ಡಿಕ್ಲೊಫೆನಾಕ್ ಸೋಡಿಯಂ ಇಂಜೆಕ್ಷನ್, ರುಸೊಮ ಲ್ಯಾಬ್‌ನ ಡೆಕ್ಸ್ಟ್ರೊಸ್ ಇಂಜೆಕ್ಷನ್, ಐಎಚ್‌ಎಲ್ ಲೈಫ್‌ಸೈನ್ಸ್ಸ್‌ನ ಮೆಟ್ರೊನಿಡಾಜೊಲ್ ಇಂಜೆಕ್ಷನ್, ಪಾಕ್ಸ್ಸನ್ಸ್ ಫಾರ್ಮಾದ ಫ್ರುಸೆಮೈಡ್ ಇಂಜೆಕ್ಷನ್ ಮತ್ತು ಮಾಡರ್ನ್ ಲ್ಯಾಬ್‌ನ ಪೈಪರಾಸಿಲ್ಲಿನ್ ಆಂಡ್ ಟ್ಯಾಜೊಬ್ಯಾಕ್ಟಮ್ ಇಂಜಕ್ಷನ್, ರೀಗೇನ್ ಲ್ಯಾಬ್‌ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್, ಒಡಾನ್‌ಸೆಟ್ರಾನ್ ಇಂಜೆಕ್ಷನ್, ಮಾರ್ಟಿನ್ ಆಂಡ್ಬ್ರೌ ನ್ ಬಯೊ ಸೈನ್ಸ್ಸ್ ಕಂಪನಿಯ ಆಟ್ರೊಪೈನ್ ಸಲ್ಫೇಟ್ ಇಂಜೆಕ್ಷನ್‌ನ ನಿರ್ದಿಷ್ಟ ಬ್ಯಾಚ್‌ನ ಔಷಧಗಳನ್ನು ನಿಷೇಧಿಸುವಂತೆ ರಾಜ್ಯ ಕೋರಿದೆ.

ಈ ಹಿಂದೆ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ ಬಾಂಗಾ ಫಾರ್ಮಾಸಿಟಿಕಲ್ಸ್ ತಯಾರಿಸಿದ ಇಂಜೆಕ್ಷನ್ ನೀಡಿದ ಪರಿಣಾಮ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಗರ್ಭಿಣಿಯರು ಮೃತಪಟ್ಟಿದ್ದರು ಎಂಬ ಸಂಗತಿಯನ್ನು ಪತ್ರದಲ್ಲಿ ಸಚಿವ ಗುಂಡೂರಾವ್ ಉಲ್ಲೇಖಿಸಿದ್ದಾರೆ. ಈ 9 ಔಷಧ ಕಂಪನಿಗಳ ಔಷಧಿಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂಬುದನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಜೀವಕ್ಕೆ ಹಾನಿಕಾರಕ ಮತ್ತು ಅಸುರಕ್ಷಿತ ಔಷಧಗಳ ಬಗ್ಗೆ ರಾಜ್ಯ ಸರ್ಕಾರ, ವೈದ್ಯರು, ಫಾರ್ಮಾಸಿಸ್ಟ್ಗಳು ಹಾಗೂ ರೋಗಿಗಳಿಗೆ ಎಚ್ಚರಿಕೆ ‘ಅಲರ್ಟ್’ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನಡೆಸಿದ ಲ್ಯಾಬ್ ಟೆಸ್ಟಿಂಗ್‌ನಲ್ಲಿ ರೋಗಿಗಳಿಗೆ ಔಷಧ ನೀಡಲು ಹಾನಿಕಾರಕವೆನಿಸಿದ 9 ಕಂಪನಿಗಳ ಹೆಸರು, ವಿಳಾಸ, ಔಷಧ ಉತ್ಪಾದನೆ ಬಗ್ಗೆ ಪತ್ರದಲ್ಲಿ ಸಂಪೂರ್ಣ ವಿವರವನ್ನು ಪ್ರಸ್ತಾಪಿಸಿ, ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *