8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ: ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ಬೆಳಗಾವಿ: ಇನ್ನೂ 8 ದಿನಗಳಲ್ಲಿ ʻಗೃಹಲಕ್ಷ್ಮಿʼ ಯೋಜನೆ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲೂಕು ಪಂಚಾಯಿತಿ ಮುಖಾಂತರ ಬಿಡುಗಡೆ ಮಾಡಬೇಕು ಅಂತ ಹೇಳಿರೋದ್ರಿಂದ ಸ್ವಲ್ಪ ತಡವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನಿಲ್ಲೋದಿಲ್ಲ. 8-10 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯ ಕುರಿತು ಸಚಿವೆ ಪ್ರತಿಕ್ರಿಯೆ ನೀಡಿದ ಸಚಿವರು, ಘಟನೆಯನ್ನು ನಾನು ಖಂಡಿಸುತ್ತೆನೆ. ಘಟನೆ ನಡೆದು ಐದೇ ನಿಮಿಷಕ್ಕೆ ಕಮೀಷನರ್ ಜೊತೆ ನಾನು ಮಾತನಾಡಿದ್ದೆ. ಯಾರು ತಪ್ಪಿತಸ್ಥರು ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ. ನಾವೆಲ್ಲರೂ ಮೊದಲು ಭಾರತೀಯರು ಕನ್ನಡಿಗರು ಸ್ವರಾಜ್ಯದ ಬಗ್ಗೆ ಮಾತನಾಡಿದಾಗ ನಾಲ್ಕೈದು ಪುಂಡರು ಬಂದು ಭಾಷಾ ವಿವಾದ ಎಳೆದು ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾರೆ. ಇದನ್ನು ಖಂಡಿಸುತ್ತೆನೆ ಎಂದಿದ್ದಾರೆ.
ಸರ್ಕಾರಿ ನೌಕರನ ಮೇಲೆ ಕೈ ಮಾಡಿದ್ದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ಹಾಗೆ ನಾವು ಮಾಡ್ತೀವಿ. ನಮ್ಮ ರಾಜ್ಯದ ಡ್ರೈವರ್ ಗಳಿಗೆ ಧಮ್ಕಿ ಹಾಕುವುದನ್ನು ನಿಲ್ಲಿಸಬೇಕು. ಸ್ಥಳೀಯ ಸಿಪಿಐ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ ಎನ್ನುವುದನ್ನು ಕೇಳಿದ್ದೆನೆ. ಸ್ಥಳೀಯ ಸಿಪಿಐ ಗಮನಕ್ಕೂ ತರದೇ ಪೋಕ್ಸೋ ಕೇಸ್ ಮಾಡಿದ್ದಾರೆ. ಇದರ ಕುರಿತು ನಾನು ಗೃಹ ಸಚಿವರು ಹಾಗೂ ಡಿಜಿಯವರಿಗೂ ಮಾತನಾಡುತ್ತೆನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.
