ಕೊಡಗಿಗೆ ಮತ್ತೆ ಹಸಿರಿನ ಕಿರೀಟ: 2018ರ ಭೂಕುಸಿತದ ಆರು ವರ್ಷಗಳ ಬಳಿಕ ವಿಪತ್ತು ಸಂಭವಿಸಿದ ಜಾಗದಲ್ಲೇ ಮತ್ತೆ ಸಮೃದ್ಧವಾಗಿ ಚಿಗುರಿದ ಗಿಡ-ಮರಗಳು!

ಮಡಿಕೇರಿ: ಪ್ರಕೃತಿ ಸೌಂದರ್ಯದಿಂದಲೇ ಇಡೀ ವಿಶ್ವದ ಗಮನ ಸೆಳೆದ ಕೊಡಗು (Kodagu) ಜಿಲ್ಲೆ 2018 ರಲ್ಲಿ ಘನಘೋರ ವಿಪತ್ತಿಗೆ ತುತ್ತಾಗಿತ್ತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾವಿಪತ್ತಿನಲ್ಲಿ ಸಾವು-ನೋವುಗಳನ್ನು ಕಂಡಿತ್ತು. ಅನೇಕರು ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಗಿತ್ತು. ನೋಡ ನೋಡ್ತಿದ್ದಂತೆ ಬೆಟ್ಟಗುಡ್ಡಗಳು ಕುಸಿದು (Landslides 2018) ಜನರನ್ನ ಅಕ್ಷರಶಃ ನಲುಗಿಸಿತ್ತು. ಆದ್ರೆ ಈಗ ವಿಪತ್ತು ಆವರಿಸಿದ್ದ ಸ್ಥಳದಲ್ಲಿ ಮತ್ತೆ ಹಸಿರು ಚಿಗುರೊಡೆದಿದೆ.

ಹೌದು. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಬರೋಬ್ಬರಿ 6-7 ವರ್ಷಗಳೇ ಕಳೆಯುತ್ತಾ ಬಂದಿದೆ. ಈಗಲೂ ಸಣ್ಣಪುಟ್ಟ ಮಳೆಯಾದ್ರೆ ಅಂದಿನ ಕಹಿ ಘಟನೆಗಳನ್ನೇ ನೆನಪು ಮಾಡಿಕೊಂಡು ಜನ ಬೆಚ್ಚಿಬೀಳುತ್ತಾರೆ
2018-19 ರಲ್ಲಿ ನಡೆದ ದುರ್ಘಟನೆಯಿಂದ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟದ ಸಾಲುಗಳು ಕುಸಿದು ಹೋಗಿತ್ತು. ಕೆಂಪು ಮಿಶ್ರಿತ ಮಣ್ಣು ಪ್ರಕೃತಿ ಮಾತೆಯ ಮೇಲೆ ಗಾಯ ಮಾಡಿದ ಹಾಗೆ ಆವರಿಸಿಕೊಂಡಿತ್ತು. ಅಂದಿನ ಕರಾಳತೆ ನೋಡಿದ ರಾಜ್ಯದ ಜನರು ಕೊಡಗಿನ ಜನರಿಗೆ ಸಹಾಯ ಹಸ್ತಾ ಚಾಚಿದ್ರು. ಈಗ ದುರಂತ ನಡೆದ ಅದೇ ಜಾಗದಲ್ಲಿ ಮತ್ತೆ ಹಸಿರು ಚಿಗುರುತ್ತಿದೆ. ಮತ್ತೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ದುರಂತವನ್ನು ಮರೆಸುತ್ತಿದೆ. ಪ್ರಕೃತಿಯಲ್ಲಿನ ಈ ಬದಲಾವಣೆ ಕಂಡು ಕೊಡಗಿನ ಜನ ಖುಷಿ ಪಡುತ್ತಿದ್ದಾರೆ.