ಅಜ್ಜ, ಸಂಬಂಧಿ ಸೇರಿ ಮಗು ಕಿಡ್ನಾಪ್ ಯೋಜನೆ: ಚಿನ್ನಕ್ಕಾಗಿ ಅಪಹರಣದ ಯತ್ನ

ಮಧ್ಯಪ್ರದೇಶ: ಕಾಂಗ್ರೆಸ್ ಶಾಸಕ ದೇವೇಂದ್ರ ಪಟೇಲ್ ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಎರಡು ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ಮುದುಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಗುವಿನ ತಂದೆಯ ಅಜ್ಜ ಅರವಿಂದ್ ಪಟೇಲ್ ಎಂದು ಗುರುತಿಸಲಾಗಿದೆ.
ಮಧ್ಯಪ್ರದೇಶದರಾಯಸೇನ್ ಜಿಲ್ಲೆಯ ಬೇಗಮ್ಗಂಜ್ ತಹಸಿಲ್ ವ್ಯಾಪ್ತಿಯ ಪಲೋಹಾ ಗ್ರಾಮದಿಂದ ಮಗುವಿನ ಅಪಹರಣ ನಡೆದಿತ್ತು. ಚಿನ್ನದ ಸುಲಿಗೆಗಾಗಿ ಈ ಅಪಹರಣ ನಡೆದಿದೆ ಎಂದು ರೈಸೇನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ತಿಳಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ದೇವೇಂದ್ರ ಪಟೇಲ್ ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಪುತ್ರನನ್ನು ಗುರುವಾರ ಬೆಳಗ್ಗೆ ರಾಯಸೇನ್ ಜಿಲ್ಲೆಯ ಬೇಗಮ್ಗಂಜ್ ತಹಸಿಲ್ ವ್ಯಾಪ್ತಿಯ ಪಲೋಹಾ ಗ್ರಾಮದಲ್ಲಿರುವ ಅವರ ಮನೆಯಿಂದ ಅಪಹರಿಸಲಾಗಿತ್ತು. ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತಡರಾತ್ರಿ ಸುಮಾರು 200 ಕಿ.ಮೀ ದೂರದಲ್ಲಿರುವ ಚಿಂದ್ವಾರ ಜಿಲ್ಲೆಯ ತಮಿಯಾ ಪಟ್ಟಣದಲ್ಲಿ ಪೊಲೀಸರು ಅಪಹರಣಕಾರರ ಕೈಯಿಂದ ಮಗುವನ್ನು ರಕ್ಷಿಸಿದರು.
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಗು ತನ್ನ ಮನೆಯಿಂದ ಕಣ್ಮರೆಯಾಗಿತ್ತು. ತಕ್ಷಣ ಅದನ್ನು ಪೊಲೀಸರು ಅಪಹರಣ ಪ್ರಕರಣವೆಂದು ಪರಿಗಣಿಸಿ ಮಗು ಮತ್ತು ಅಪಹರಣಕಾರರನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ನಿಫರ್ ಡಾಗ್ಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಮಗುವಿನ ಪತ್ತೆಗಾಗಿ ನಾವು 11 ಪೊಲೀಸ್ ತಂಡಗಳನ್ನು ರಚಿಸಿದ್ದು, ಸುಳಿವುಗಳ ಆಧಾರದ ಮೇಲೆ ಅಪಹರಿಸಿದ ಮಗುವನ್ನು ಅರವಿಂದ್ ಪಟೇಲ್ ಅವರ ಸ್ನೇಹಿತನ ಮನೆಯಲ್ಲಿ ಪತ್ತೆ ಮಾಡಲಾಯಿತು. ಮಗುವನ್ನು ರಕ್ಷಿಸಿದ ಅನಂತರ ಕುಟುಂಬ ಸದಸ್ಯರಿಗೆ ಮಗುವನ್ನು ಹಸ್ತಾಂತರಿಸಲಾಗಿದೆ ಎಂದು ಎಂದು ರಾಯಸೇನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ತಿಳಿಸಿದ್ದಾರೆ.
1.5 ಕೆಜಿ ಚಿನ್ನದ ಸುಲಿಗೆಗಾಗಿ ಈ ಅಪಹರಣ ನಡೆದಿದ್ದು, ಬಂಧಿಸಲಾದ ಮೂವರು ವ್ಯಕ್ತಿಗಳಲ್ಲಿ ಪ್ರಮುಖ ಆರೋಪಿಯನ್ನು ಮಗುವಿನ ತಂದೆಯ ಅಜ್ಜ ಅರವಿಂದ್ ಪಟೇಲ್ ಎಂದು ಗುರುತಿಸಲಾಗಿದೆ . ಈ ಅಪಹರಣವನ್ನು ಅರವಿಂದ್ ಪಟೇಲ್ ಮತ್ತು ಅವರ ಸಂಬಂಧಿ ರಾಕೇಶ್ ಪಟೇಲ್ ನಿಖರವಾಗಿ ಯೋಜಿಸಿದ್ದರು. ಮೂರನೇ ವ್ಯಕ್ತಿಯೊಬ್ಬನ ಸಹಾಯದಿಂದ ಇದನ್ನು ಮಾಡಲಾಗಿದೆ. ಈ ಮೂವರು ಮಗುವಿನ ಬಿಡುಗಡೆಗಾಗಿ 1.5 ಕೆಜಿ ಚಿನ್ನವನ್ನು ಕೇಳಿದ್ದರು.
ಅಪಹರಣಕ್ಕೆ ಆರೋಪಿಗಳು ಬಳಸಿದ್ದ ವ್ಯಾನ್ ಮತ್ತು ಮೋಟಾರ್ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಂಡೆ ತಿಳಿಸಿದ್ದಾರೆ.