ಬಂಟ್ವಾಳದಲ್ಲಿ ಅನಾವರಣಗೊಂಡ ಭವ್ಯ ಸಾಮರಸ್ಯ: ಮಸೀದಿಯ ಮೆಟ್ಟಿಲೇರಿ ಸೀಯಾಳ ಸ್ವೀಕರಿಸಿದ ದೈವ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನುಷ್ಯತ್ವ ಮತ್ತು ಧಾರ್ಮಿಕ ಸಹಬಾಳ್ವೆಯ ಸುಂದರ ದೃಶ್ಯವೊಂದು ಅನಾವರಣಗೊಂಡಿದೆ. ಅರಸರ ಕಾಲದ ಪುರಾತನ ಪರಂಪರೆಯಂತೆ, ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ದೈವದ ಭಂಡಾರವು ಮಸೀದಿಯ ಮೆಟ್ಟಿಲೇರಿ ಸೀಯಾಳ (ಎಳನೀರು) ಸ್ವೀಕರಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದೆ. ಪ್ರತಿ ವರ್ಷವೂ ಈ ಆಚರಣೆಗಳು ಇಲ್ಲಿ ನಡೆಯುತ್ತ ಬಂದಿದೆ. ಮುಸ್ಲಿಂ ಧರ್ಮದ ಜನ ದೈವಗಳಿಗೆ ಈ ಮೂಲಕ ವಿಶೇಷ ಗೌರವವನ್ನು ನೀಡುತ್ತಾರೆ.
ಸಜೀಪನಡು ಮೂಲಸ್ಥಾನದಿಂದ ಮಂಜದಗೋಳಿ ಕ್ಷೇತ್ರಕ್ಕೆ ಭಂಡಾರ ಸಾಗುವ ಹಾದಿಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ನಂದಾವರ ಕೇಂದ್ರ ಜುಮಾ ಮಸೀದಿಯ ಪ್ರಮುಖರು ದೈವದ ಭಂಡಾರಕ್ಕೆ ಭಕ್ತಿಯಿಂದ ಸೀಯಾಳ ಅರ್ಪಿಸುತ್ತಾರೆ. ದೈವವು ಮಸೀದಿಯ ನಾಲ್ಕು ಮೆಟ್ಟಿಲುಗಳನ್ನು ಹತ್ತಿ ಈ ಸೇವೆಯನ್ನು ಸ್ವೀಕರಿಸುವುದು ಇಲ್ಲಿನ ವಿಶೇಷವಾಗಿದೆ.ಮಂಜದಗೋಳಿ ಜಾತ್ರೆಯ ಅಂಗವಾಗಿ ನಡೆಯುವ ಈ ಸಂಪ್ರದಾಯವು ಈ ವರ್ಷವೂ (ಮಾರ್ಚ್ 17) ಅತ್ಯಂತ ಶ್ರದ್ಧೆಯಿಂದ ನೆರವೇರಿದೆ. ಇಂದಿನ ಕಾಲಘಟ್ಟದಲ್ಲಿ ಧರ್ಮಗಳ ನಡುವೆ ಗೋಡೆಗಳು ನಿರ್ಮಾಣವಾಗುತ್ತಿರುವಾಗ, ನಂದಾವರದ ಈ ಆಚರಣೆಯು ಸಹಬಾಳ್ವೆ ಮತ್ತು ಪರಸ್ಪರ ಗೌರವಕ್ಕೆ ಮಾದರಿಯಾಗಿದೆ. ಮಸೀದಿ ಹಾಗೂ ದೇವಸ್ಥಾನಗಳ ನಡುವಿನ ಈ ಅವಿನಾಭಾವ ಸಂಬಂಧ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾಗಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೈವ ಮಸೀದಿಯ ಬಳಿ ಬಂದು, ನಿಂತು ಎಲ್ಲರಿಗೂ ಅಭಯ ನೀಡುವುದನ್ನು ಕಾಣಬಹುದು. ದೈವ ಬರುವ ಮಾರ್ಗದಲ್ಲಿ ನಿಂತು ಸಾವಿರಾರೂ ಮುಸ್ಲಿಂ ಜನರು ಭಕ್ತಿಯಿಂದ ನೋಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
