ಕೊಡಗಿನ ಕುಶಾಲನಗರದಲ್ಲಿ ವಿಜೃಂಭಣೆಯ ಗಣಪತಿ ರಥೋತ್ಸವ: 105ನೇ ವರ್ಷದ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿ

ಮಡಿಕೇರಿ: ಕೊಡಗಿನ ಗಡಿಭಾಗ ಕುಶಾಲನಗರದಲ್ಲಿ ಐತಿಹಾಸಿಕ ಗಣಪತಿ ದೇವಸ್ಥಾನದ (Ganapathi Temple) 105ನೇ ವರ್ಷದ ಬ್ರಹ್ಮರಥೋತ್ಸವ (Brahmarathotsava) ನಡೆಯಿತು. ಅಭಿಜಿನ್ ಲಗ್ನದಲ್ಲಿ ಆರಂಭವಾದ ಗಣಪತಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಬಾಳೆಹಣ್ಣು, ಜವನ, ಎಸೆದು ಭಕ್ತಿಭಾವ ಮೆರೆದರು.

ಇದಕ್ಕೂ ಮೊದಲು ದೇವಾಲಯದ ಒಳಾಂಗಣದಿಂದ ಬೆಳ್ಳಿ ಗಣಪತಿ ಉತ್ಸವ ಮೂರ್ತಿಯನ್ನ ಹೊರಗೆ ತರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಗಣಪತಿ ಬಪ್ಪಾ ಮೋರಿಯಾ ಎಂದು ಕೂಗಿ ಹರ್ಷೋದ್ಘಾರ ಮೆರೆದರು. ಅಲ್ಲದೇ ದೇವಾಲಯ ಮುಂಭಾಗ ನೂರಾರು ಯುವಕರು ಓಂ ಆಕಾರದಲ್ಲಿ ಕರ್ಪೂರ ಹಚ್ಚಿ ಗಣೇಶನ ಸ್ತೋತ್ರ ಪಠಿಸಿದ್ರು
ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ಆರಂಭವಾದ ರಥೋತ್ಸವಕ್ಕೆ ಸಾವಿರಾರು ಭಕ್ತರು, ಈಡುಗಾಯಿ ಹೊಡೆದು ತಮ್ಮ ಇಷ್ಟಾರ್ಥಗಳು ಫಲಿಸಲೆಂದು ಪ್ರಾರ್ಥಿಸಿದ್ರು.
ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಆಂಜನೇಯ ದೇವಾಲಯದವರೆಗೆ ಸಾವಿರಾರು ಭಕ್ತರು ರಥ ಎಳೆದು ಭಕ್ತಿಮೆರೆದ್ರು. ಈ ಬ್ರಹ್ಮರಥೋತ್ಸವಕ್ಕೆ ನೆರೆಯ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತ ಗಣ ವಿಘ್ನೇಶ್ವರನನ್ನ ಆರಾಧಿಸಿದ್ರು. ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ನೇತೃತ್ವದಲ್ಲಿ ರಥೋತ್ಸವ ನೆರೆವೇರಿತು