Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆರ್‌ಸಿಬಿ ಸಂಭ್ರಮಾಚರಣೆಯ ಬಗ್ಗೆ ಪೊಲೀಸ್ ಸಲಹೆ ನಿರ್ಲಕ್ಷಿಸಿ ಸರ್ಕಾರದ ತಕ್ಷಣದ ಕಾರ್ಯಕ್ರಮ

Spread the love

ಬೆಂಗಳೂರು: ತಕ್ಷಣವೇ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವ ಬದಲು ಒಂದು ವಾರದ ನಂತರ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಅದನ್ನು ಕಡೆಗಣಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆರಂಭಿಕ ಯೋಜನೆಯ ಪ್ರಕಾರ, ಆಟಗಾರರನ್ನು ವಿಧಾನಸೌಧದಿಂದ ಬಾಳೇಕುಂದ್ರಿ ವೃತ್ತಕ್ಕೆ ಮೆರವಣಿಗೆ ಮೂಲಕ ಕರೆತರಲು ಉದ್ದೇಶಿಸಲಾಗಿತ್ತು. ನಂತರ ಕಬ್ಬನ್ ರಸ್ತೆ, ಎಂಜಿ ರಸ್ತೆ ಮತ್ತು ಅಂತಿಮವಾಗಿ ಕ್ವೀನ್ಸ್ ವೃತ್ತದ ಬಳಿಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವುದು ಎಂದು ಹೇಳಲಾಗಿತ್ತು. ಆದರೆ, ಯಾವುದೇ ಮೆರವಣಿಗೆಯನ್ನು ನಡೆಸಬೇಡಿ ಎಂದು ನಾವು ಮನವಿ ಮಾಡಿದ್ದೆವು. ಒಂದೇ ಸ್ಥಳದಲ್ಲಿ ಸಂಘಟಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಹೇಳಿದ್ದೆವು. ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆತಂದು ಅಲ್ಲಿಯೇ ಕಾರ್ಯಕ್ರಮ ಮುಗಿಸುವಂತೆ ಸಲಹೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ.ಪೊಲೀಸ್ ಅಧಿಕಾರಿಗಳ ಸಲಹೆ ನಂತರವೂ ಸರ್ಕಾರ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ಎರಡೂ ಬುಧವಾರವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾದವು ಎಂದು ವರದಿಯಾಗಿದೆ. ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು ಇಂದು ಅಥವಾ ನಾಳೆ ಹೊರಡುತ್ತಾರೆ ಎಂಬುದು ಅವರ ವಾದವಾಗಿತ್ತು. ಸಾಮಾನ್ಯವಾಗಿ, ಸರ್ಕಾರವು ಇಂಥ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಬಯಸುತ್ತದೆ. ಒಂದು ವೇಳೆ ಸಂಭ್ರಮಾಚರಣೆಗೆ ಸರ್ಕಾರ ನಿರಾಕರಿಸಿದ್ದರೆ, ಅದು ಮತ್ತೊಂದು ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.ಮಂಗಳವಾರ ರಾತ್ರಿಯಿಂದಲೇ ಬೆಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ಬೆಳಗಿನ ಜಾವ 3.30 ರವರೆಗೆ ಮತ್ತು ಹೊರವಲಯದಲ್ಲಿ ಬೆಳಗಿನ ಜಾವ 4.30 ರ ವರೆಗೆ ವಿಜಯೋತ್ಸವ ಆಚರಣೆಗಳು ನಡೆದಿದ್ದವು. ಬೆಳಗಿನ ಜಾವ 5.30 ರವರೆಗೆ, ಪೊಲೀಸ್ ಆಯುಕ್ತರಿಂದ ಹಿಡಿದು ಕಾನ್‌ಸ್ಟೇಬಲ್‌ಗಳವರೆಗೆ ನಮ್ಮ ಎಲ್ಲಾ ಸಿಬ್ಬಂದಿ ಬೀದಿಗಳಲ್ಲಿದ್ದರು ಮತ್ತು ಸಂಪೂರ್ಣವಾಗಿ ದಣಿದಿದ್ದರು. ಇದು ಸಂಪೂರ್ಣ ಹುಚ್ಚುತನ. ಈ ರೀತಿಯ ಉನ್ಮಾದವನ್ನು ನಾವು ಎಂದಿಗೂ ನೋಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *