ಡೆಲಿವರಿ ವಾರಿಯರ್ಸ್ಗೆ ಶುಭಸುದ್ದಿ: ಚೆನ್ನೈನಲ್ಲಿ ವಿಶ್ರಾಂತಿಗೆ ಎಸಿ ರೆಸ್ಟ್ರೂಂ ಸೌಲಭ್ಯ

ಚೆನ್ನೈ: ಆನ್ಲೈನ್ ಆಹಾರ ಡೆಲಿವರಿ ಫ್ಲಾಟ್ಫಾರ್ಮ್ಗಳಡಿ ಆಹಾರ ಪೂರೈಕೆ ಮಾಡುವ ಡೆಲಿವರಿ ವಾಯ್/ಗರ್ಲ್ಗಳಿಗೆ ವಿಶ್ರಾಂತಿ ಪಡೆಯಲು ಊಟ ತಿಂಡಿ ಮಾಡಿಕೊಳ್ಳಲು ಸುಲಭವಾಗುವುದಕ್ಕೆ ಈಗ ಚೆನ್ನೈನಲ್ಲಿ ಅವರಿಗಾಗಿ ಎಸಿ ರೆಸ್ಟ್ರೂಮ್ಗಳನ್ನು ತೆರೆಯಲಾಗಿದೆ. ಚೆನ್ನೈ, ಬೆಂಗಳೂರು, ಮುಂಬೈ, ಹೈದರಾಬಾದ್ನಂಥ ಮೆಟ್ರೋಸಿಟಿಗಳಲ್ಲಿ ಸ್ವಿಗ್ಗಿ, ಜೊಮ್ಯಾಟೊ ಮುಂತಾದ 24 ಗಂಟೆಯೂ ಆನ್ಲೈನ್ ಆಹಾರ ಪೂರೈಕೆ ಮಾಡುವ ಕಂಪನಿಗಳಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ.
ಈ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನ, ರಾತ್ರಿ ಹಗಲು, ಬಿಸಿಲು ಮಳೆ ಅಂತ ನೋಡದೆ ಫುಡ್ ಡೆಲಿವರಿ ಮಾಡ್ತಾ ಇರ್ತಾರೆ ಅವರಿಗೆ ಸಹಾಯವಾಗಲಿ ಎಂದು ಈಗ ಚೆನ್ನೈನಲ್ಲಿ ಎಸಿ ರೆಸ್ಟ್ರೂಮ್ ತೆರೆಯಲಾಗಿದೆ.
ತಮಿಳುನಾಡಿನಲ್ಲಿ ಆನ್ಲೈನ್ ಆಹಾರ ಪೂರೈಕೆ ಮಾಡುವ ಕೆಲಸಗಾರರ ಪೈಕಿ ಶೇ.10 ರಷ್ಟು ಜನ ಮಹಿಳೆಯರಿದ್ದಾರೆ. ಇವರಿಗೆ ಕುಡಿಯೋ ನೀರು, ಸ್ವಚ್ಛ ಟಾಯ್ಲೆಟ್ನಂಥ ಸೌಲಭ್ಯಗಳು ಸಿಗದೆ ಪ್ರತಿದಿನ ತೊಂದರೆ ಅನುಭವಿಸ್ತಾ ಇದ್ದಾರೆ. ಬಿಸಿಲಲ್ಲಿ ಓಡಾಡಿ ಫುಡ್ ಡೆಲಿವರಿ ಮಾಡಿ ಬಂದ್ರೆ, ವಿಶ್ರಾಂತಿ ತಗೊಳ್ಳೋಕೆ ಸರಿಯಾದ ಜಾಗ ಸಿಗುವುದಿಲ್ಲ. ರಸ್ತೆ ಬದಿಯಲ್ಲಿ, ಮರದ ಕೆಳಗೆ ಕೂತು ಅವರು ವಿಶ್ರಾಂತಿ ತಗೊಳ್ಳೋದನ್ನ ನೀವು ನೋಡಿರಬಹುದು.
ಹೀಗಾಗಿ ಇದಕ್ಕೆ ಒಂದು ಪರಿಹಾರ ಸಿಗುತ್ತಾ ಅಂತ ಕಾಯ್ತಾ ಇದ್ದವರಿಗೆ ಚೆನ್ನೈ ಮಹಾನಗರ ಪಾಲಿಕೆ ಒಂದು ಒಳ್ಳೆ ಯೋಜನೆ ತಂದಿದೆ. ಫುಡ್ ಡೆಲಿವರಿ ಮಾಡುವವರು ವಿಶ್ರಾಂತಿ ತಗೊಳ್ಳೋಕೆ ಅಂತ ಚೆನ್ನೈನ ಅಣ್ಣಾನಗರ ಮತ್ತು ಕೆ.ಕೆ.ನಗರದಲ್ಲಿ ಎಸಿ ರೆಸ್ಟ್ರೂಮ್ಗಳನ್ನು ತೆರೆಯಲಾಗಿದೆ.
ಈ ಎಸಿ ರೆಸ್ಟ್ರೂಮ್ನಲ್ಲಿ ಏನೇನು ಸೌಲಭ್ಯ ಇದೆ?
ಸುಮಾರು 600 ಚದರ ಅಡಿ ವಿಸ್ತೀರ್ಣದಲ್ಲಿ ಈ ರೆಸ್ಟ್ರೂಮ್ ಇದೆ. ಒಳಗೆ 20 ಅಡಿ ಉದ್ದ, 10 ಅಡಿ ಅಗಲದ ಟಾಯ್ಲೆಟ್, ಕುಡಿಯೋ ನೀರು, ಮೊಬೈಲ್ ಚಾರ್ಜ್ ಮಾಡೋ ಸೌಲಭ್ಯ ಇದೆ. ಒಂದೇ ಸಲ 25 ಜನ ಇಲ್ಲಿ ವಿಶ್ರಾಂತಿ ತಗೊಳ್ಳಬಹುದು. ಈ ಸ್ಥಳದಲ್ಲಿ 20 ಟೂ-ವೀಲರ್ಗಳನ್ನ ಪಾರ್ಕ್ ಮಾಡಬಹುದು. ಫುಡ್ ಡೆಲಿವರಿ ಮಾಡುವವರು ಐಡೆಂಟಿಟಿ ಕಾರ್ಡ್ ತೋರಿಸಿದ್ರೆ ಮಾತ್ರ ಇಲ್ಲಿ ಒಳಗೆ ಬಿಡ್ತಾರೆ. ಈ ರೆಸ್ಟ್ರೂಮ್ಗೆ ಸೆಕ್ಯೂರಿಟಿ ಗಾರ್ಡ್ ಕೂಡ ಇರ್ತಾರೆ.
ಪ್ರಾಯೋಗಿಕವಾಗಿ ಜಾರಿ
ಈ ಎಸಿ ರೆಸ್ಟ್ರೂಮ್ಗಳನ್ನು ಸದ್ಯಕ್ಕೆ ಅಣ್ಣಾನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದು ಯಶಸ್ವಿಯಾದಲ್ಲಿ ಮುಂದೆ ಮೈಲಾಪುರ, ಟಿ.ನಗರ, ಕೆ.ಕೆ.ನಗರ, ನುಂಗಂಬಾಕ್ಕಂ, ರಾಯಪೇಟೆಯಲ್ಲೂ ಇಂಥ ರೆಸ್ಟ್ರೂಮ್ಗಳನ್ನು ತೆರೆಯೋ ಪ್ಲಾನ್ ಚೆನ್ನೈ ಮಹಾನಗರ ಪಾಲಿಕೆ ಮುಂದೆ ಇದೆ. ಇಡೀ ಭಾರತದಲ್ಲೇ ಮೊದಲ ಬಾರಿಗೆ ತಮಿಳುನಾಡು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಫುಡ್ ಡೆಲಿವರಿ ಮಾಡುವ ಮಹಿಳೆಯರಿಗೆ ವರದಾನ
ಫುಡ್ ಡೆಲಿವರಿ ಮಾಡುವವರು ಎಷ್ಟು ಕಷ್ಟ ಪಡ್ತಾರೆ ಅಂತ ಎಲ್ಲರಿಗೂ ಗೊತ್ತು. ಅದರಲ್ಲೂ ಹೆಂಗಸರಿಗೆ ಈ ಯೋಜನೆ ವರದಾನ. ಈ ಬಗ್ಗೆಮಾತನಾಡಿರುವ ತಮಿಳುನಾಡು ಸಿಎಂ ಸ್ಟಾಲಿನ್, ಭಾರತದ ಭವಿಷ್ಯದ ಯೋಜನೆಗಳನ್ನು ಇವತ್ತೇ ತಮಿಳುನಾಡು ಮಾಡ್ತಿದೆ. ಬಿಸಿಲಲ್ಲಿ ಓಡಾಡುವವರಿಗೆ ನೆರಳು, ಬಾಯಾರಿಕೆಯಲ್ಲಿರುವವರಿಗೆ ನೀರು, ಕಷ್ಟದಲ್ಲಿರುವವರಿಗೆ ಆಸರೆ ಕೊಡೋದು ದ್ರಾವಿಡ ಮಾದರಿ ಎಂದು ಹೇಳಿದ್ದಾರೆ.
ತಮಿಳುನಾಡಿನ ಮುಂಜಾನೆಯ ಊಟ ಯೋಜನೆಯನ್ನು ಬೇರೆ ರಾಜ್ಯಗಳು ಅನುಕರಿಸಿವೆ. ಹಾಗೆಯೇ ಈ ಫುಡ್ ಡೆಲಿವರಿ ರೆಸ್ಟ್ರೂಮ್ ಯೋಜನೆಯನ್ನೂ ಬೇರೆ ರಾಜ್ಯಗಳು ಅನುಕರಿಸುತ್ತವೆ ಅನ್ನೋದ್ರಲ್ಲಿ ಡೌಟೇ ಇಲ್ಲ ಎಂಬುದು ಈ ಯೋಜನೆ ಜಾರಿಗೊಳಿಸಿದವರ ಅಭಿಪ್ರಾಯವಾಗಿದೆ.