ಶಿಶು ಪಾಲನೆ ನೆಪದಲ್ಲಿ ಚಿನ್ನ ಕಳವು: ಮನೆಕೆಲಸದಾಳಿಂದ 12 ಲಕ್ಷದ ಮೋಸ!

ಗಿರಿನಗರ : ಮನೆಗಳಲ್ಲಿ ಕೆಲಸ ಮಾಡುವುದಾಗಿ ಕೈ ಚಳಕ ತೋರಿಸಿದ್ದ ಮನೆಕೆಲಸದಾಳುಗಳನ್ನು ಎಚ್ಎಸ್ಆರ್ ಲೇಔಟ್, ಗಿರಿನಗರ ಹಾಗೂ ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್ವೇರ್ ದಂಪತಿಯ ಮಗು ಪಾಲನೆಗೆ ಕೆಲಸಕ್ಕೆ ಬಂದು ಚಿನ್ನಾಭರಣ ಕದ್ದು ಈಗ ಮಹಿಳೆಯೊಬ್ಬರು ಜೈಲು ಸೇರಿದ್ದಾರೆ. ವಿಭೂತಿಪುರದ ವರಲಕ್ಷ್ಮೀ ಸೆರೆಯಾಗಿದ್ದು, ಆಕೆಯಿಂದ 12 ಲಕ್ಷ ರು. ಮೌಲ್ಯದ 128 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಲಾಗಿದೆ. ಬಸವನಗರದಲ್ಲಿ ಟೆಕ್ಕಿ ಪ್ರಕಾಶ್ ದಂಪತಿ ನೆಲೆಸಿದೆ. ತಮ್ಮ ನವಜಾತ ಶಿಶು ಪಾಲನೆಗೆ ವರಲಕ್ಷ್ಮೀ ಳನ್ನು ಅವರು ನೇಮಿಸಿಕೊಂಡಿದ್ದರು
ಅಂತೆಯೇ ಮಗುವಿಗೆ ಸ್ನಾನ ಮಾಡಿಸಲು ವರಲಕ್ಷ್ಮೀ ಬರುತ್ತಿದ್ದಳು. ಇತ್ತೀಚೆಗೆ ತಮ್ಮ ಹೊಸ ಕಾರಿನ ಪೂಜೆ ಮಾಡಿಸಲು ಪ್ರಕಾಶ್ ದಂಪತಿ ದೇವಾಲಯಕ್ಕೆ ತೆರಳಿದ್ದರು. ಹಾಗಾಗಿ ಅಂದು ಕೆಲಸಕ್ಕೆ ಬರುವುದು ಬೇಡ ಎಂದು ಕೆಲಸದಾಕೆಗೆ ಅವರು ಹೇಳಿದ್ದರು. ಆದರೆ ಮನೆ ಮಾಲಿಕರು ಹೊರ ಹೋಗಿದ್ದನ್ನು ತಿಳಿದು ವರಲಕ್ಷ್ಮೀ, ಟೆಕ್ಕಿ ಮನೆ ಬಂದು ಆಭರಣ ಕಳವು ಮಾಡಿದ್ದಳು. ಮರು ದಿನ ಆಭರಣ ಕಳವು ಮನೆ ಮಾಲಿಕರಿಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಕೃತ್ಯ ನಡೆದ ದಿನ ಮನೆಕೆಲಸದಾಳು ಬಂದಿದ್ದನ್ನು ಪಕ್ಕದ ಮನೆಯ ಮಗು ಹೇಳಿತ್ತು. ಈ ಮಾಹಿತಿ ಆಧರಿಸಿ ಶಂಕೆ ಮೇರೆಗೆ ವರಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ..