ಬೆಂಗಳೂರಿನ ಪಾದಚಾರಿ ಮಾರ್ಗಗಳ ಸ್ವಚ್ಛತೆಯಲ್ಲಿ ಕೈ ಜೋಡಿಸಿ ಮಾನಹೋಗುವಂತೆ ನಡೆದುಕೊಂಡ ಮಹಾನಗರ ಪಾಲಿಕೆಯ ಸಿಟಿ ಕಮಿಷನರ್

ಬೆಂಗಳೂರು: ನಾವು ಬೇರೆಯವರಿಗೆ ದೂರುವ ಬದಲು ಬದಲಾವಣೆ ನಮ್ಮಿಂದ ಆರಂಭವಾಗುತ್ತದೆ. ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಈ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಮಸ್ಯೆಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನಿಜಕ್ಕೂ ಮೆಚ್ಚುವಂತಹ ಕೆಲಸ. ಹೌದು, ಕೆನಡಾ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ಪಾದಚಾರಿ ಮಾರ್ಗದಲ್ಲಿ ಎರಡೂವರೆ ಕಿಲೋಮೀಟರ್ ನಡೆದು ಹೋಗಿ ಇಲ್ಲಿನ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಶೀಘ್ರಗತಿಯಲ್ಲಿ ಕ್ರಮ ಕೈಗೊಂಡು ಈ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಿದೆ. ಹೌದು, ಗ್ರೇಟರ್ ಬೆಂಗಳೂರು ಕೇಂದ್ರ ಪಾಲಿಕೆ ಕಮಿಷನರ್ ರಾಜೇಂದ್ರ ಚೋಳನ್ (GBCC Commissioner Rajendra Cholan) ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಚ್ಛತೆಗೆ ಕೈ ಜೋಡಿಸಿದ ಕಮಿಷನರ್ ಮಾಡಿದ್ದೇನು?
@feedmilesapp ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಡಿದ್ದ ವಿಡಿಯೋದ ಬಳಿಕ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಕೇಂದ್ರ ಪಾಲಿಕೆ ಕಮಿಷನರ್ ರಾಜೇಂದ್ರ ಚೋಳನ್ ಖಾಸಗಿ ಸ್ವಯಂಸೇವಕರ ತಂಡದ ಜೊತೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿರುವುದನ್ನು ಕಾಣಬಹುದು. ಕಮಿಷನರ್ ರಾಜೇಂದ್ರ ಚೋಳನ್ ಕೆನಡಾ ವ್ಯಕ್ತಿಯೊಂದಿಗೆ ಕೈ ಕುಲುಕಿ ಮಾತಾಡುವುದನ್ನು ಕಾಣಬಹುದು. ಸ್ವಚ್ಛಗೊಳಿಸಿದ ಪಾದಚಾರಿ ಮಾರ್ಗದಲ್ಲಿ ಎಲ್ಲರೊಂದಿಗೆ ಕುಳಿತು ತಿಂಡಿ ಸೇವಿಸಿ ವಿವಾದವನ್ನು ಮೈ ಮೇಲೆ ಎಳೆದು ಕೊಂಡಿದ್ದಾರೆ. ಈಗಾಗಲೇ ಸ್ವಚ್ಛಗೊಳಿಸಿದ ಸ್ಥಳಕ್ಕೆ ಕೆನಡಾದ ವ್ಯಕ್ತಿಯನ್ನು ಬರಲು ಹೇಳಿ ವಿಡಿಯೋ ಮಾಡುವಂತೆ ಹೇಳಿತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ.
ಪಾದಚಾರಿ ಮಾರ್ಗದ ವಿಡಿಯೋ ಮಾಡಿದ್ದ ಕೆನಡಾದ ವ್ಯಕ್ತಿ
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಅವರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹತ್ತಿರದ ಸ್ಟಾರ್ಬಕ್ಸ್ ಔಟ್ಲೆಟ್ಗೆ ಸರಿಸುಮಾರು 2.4 ಕಿ.ಮೀ ದೂರದವರೆಗೆ ಈ ಪಾದಚಾರಿ ಮಾರ್ಗದ ಮೂಲಕ ನಡೆದುಕೊಂಡು ಹೋಗಿದ್ದು ಇಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ವಿಡಿಯೋ ಮಾಡಿದ್ದರು. ಸ್ವಚ್ಛತೆಯೂ ಕಣ್ಮರೆಯಾಗಿದೆ ಎನ್ನುವುದು ಸ್ಪಷ್ಟವಾಗಿ ತೋರಿಸುವ ಪ್ರಯತ್ನ ಮಾಡಿದ್ದರು. ಈ ಮಾರ್ಗವನ್ನು ಯಾರು ಬಳಸುತ್ತಿಲ್ಲ. ದುರ್ನಾತ ಬೀರುತ್ತಿದೆ ಎಂದು ಹೇಳಿದ್ದು ಇಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು.
ಸೆಪ್ಟೆಂಬರ್ 14 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಈಗ ಕಮಿಷನರ್ ಅವರಿಗೆ ತಮ್ಮ ಕರ್ತವ್ಯದ ನೆನಪಾಯಿತೇ ಎಂದು ಕೇಳಿದ್ದಾರೆ. ಮತ್ತೊಬ್ಬರು, ಸಮಸ್ಯೆಗಳಿವೆ ಎಂದು ತಿಳಿಯಲು ಬೆಂಗಳೂರಿನ ಅಧಿಕಾರಿಗಳಿಗೆ ಕೆನಾಡದ ವ್ಯಕ್ತಿಯ ಅಗತ್ಯವಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಇದು ನಮ್ಮ ದೇಶದ ಪರಿಸ್ಥಿತಿ, ನಮ್ಮಲ್ಲಿನ ಸಮಸ್ಯೆಯನ್ನು ಇನ್ಯಾರೋ ತೋರಿಸಿ ಬುದ್ಧಿ ಹೇಳುವಂತಾಗಿದೆ ಎಂದು ಹೇಳಿದ್ದಾರೆ.