ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಗಳಿಗೆ ಗಲ್ಲು ಮತ್ತು ಪರಿಹಾರ ಆದೇಶ

ಪಾಟ್ನಾ: ಎಂಟು ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪ್ರಕರಣದಲ್ಲಿ ಸುಶೀಲ್ ಕುಮಾರ್ ರೈ ಮತ್ತು ಓಂ ಪ್ರಕಾಶ್ ಝಾ ಎಂಬ ಇಬ್ಬರಿಗೆ ಮಧುಬನಿ ಜಿಲ್ಲೆಯ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮಧುಬನಿಯ ಪೋಕ್ಸೋ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೈಯದ್ ಮೊಹಮ್ಮದ್ ಫಜ್ಲುಲ್ ಬಾರಿ ಅವರು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ತಲಾ 1.20 ಲಕ್ಷ ರೂ.
ದಂಡವನ್ನು ವಿಧಿಸಿದ್ದಾರೆ.
ಇಬ್ಬರು ಅಪರಾಧಿಗಳಿಂದ ದಂಡವಾಗಿ ಪಡೆದ ಮೊತ್ತವನ್ನು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ನೀಡಲಾಗುವುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಇದರ ಜೊತೆಗೆ, ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವಾಗಿ 8 ಲಕ್ಷ ರೂ.ಗಳನ್ನು ಪಾವತಿಸಲು ನ್ಯಾಯಾಲಯ, ಸರ್ಕಾರಕ್ಕೆ ನಿರ್ದೇಶನ ನೀಡಿದೆ.
2023 ರಲ್ಲಿ ಮಧುಬನಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು.
ಈ ಘಟನೆ ‘ಅಪರೂಪದ’ ವರ್ಗಕ್ಕೆ ಸೇರಿದ್ದು, ಅಪರಾಧಿಗಳಿಗೆ ನೀಡಲಾಗುವ ಕಠಿಣ ಶಿಕ್ಷೆಯು ಮಹಿಳೆಯರ ಮೇಲಿನ ಅಪರಾಧ ಘಟನೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತದೆ ಎಂದು ನ್ಯಾಯಾಲಯ ಗಮನಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಜೂನ್ 2023 ರಲ್ಲಿ ಸಂತ್ರಸ್ತೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಕೋಸಿ ಕಾಲೋನಿಯಲ್ಲಿರುವ ತಾತ್ಕಾಲಿಕ ಮನೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಮಾಡಿ, ನಂತರ ಟವಲ್ನಿಂದ ಬಾಯಿ ಮುಚ್ಚಿ ಕೊಲೆ ಮಾಡಿದ್ದರು.