ತಿರುಪತಿ ಲಡ್ಡು ತಯಾರಿಕೆಗೆ ಹೋಗ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದ ತುಪ್ಪ ಹಿಡಿಯಲು ಮುಗಿಬಿದ್ದ ಜನ!

ಕಡಪ: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ತುಪ್ಪದ ಟ್ಯಾಂಕರ್ ಪಲ್ಟಿಯಾಗಿದೆ. ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಲಡ್ಡು ಪ್ರಸಾದ ತಯಾರಿಕೆಗಾಗಿ ಸಾಗಿಸಲಾಗುತ್ತಿದ್ದ ಸಾವಿರಾರು ಲೀಟರ್ ತುಪ್ಪ ನೆಲದ ಪಾಲಾಗಿದ್ದು ಅದನ್ನಸಂಗ್ರಹಿಸಲು ಅಲ್ಲಿನ ಸ್ಥಳೀಯರು ಮುಗಿಬಿದ್ದಿದ್ದಾರೆ.
ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆ ಸಮೀಪ ಈ ಘಟನೆ ಸಂಭವಿಸಿದೆ. ಸುಮಾರು 21,000 ಲೀಟರ್ ಶುದ್ಧ ತುಪ್ಪವನ್ನು ಹೊತ್ತು ಸಾಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಟ್ಯಾಂಕರ್ನಲ್ಲಿದ್ದ ತುಪ್ಪ ರಸ್ತೆಯ ಮೇಲೆ ಹರಿಯಲಾರಂಭಿಸಿತು.ರಸ್ತೆಯಲ್ಲಿ ತುಪ್ಪ ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೈಗೆ ಸಿಕ್ಕ ಪಾತ್ರೆಗಳನ್ನು ಹಿಡಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮನೆಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳು, ಬಕೆಟ್ಗಳು, ದೊಡ್ಡ ಡ್ರಮ್ಗಳು ಹಾಗೂ ಟಿನ್ಗಳನ್ನು ಹಿಡಿದು ತುಪ್ಪವನ್ನು ತುಂಬಿಸಿಕೊಳ್ಳಲು ಮುಗಿಬಿದ್ದರು. ಅಷ್ಟೇ ಅಲ್ಲದೆ, ಕೆಲವರು ದ್ವಿಚಕ್ರ ವಾಹನಗಳಲ್ಲಿ ಬಂದು ದೊಡ್ಡ ದೊಡ್ಡ ಕ್ಯಾನ್ಗಳಲ್ಲಿ ತುಪ್ಪವನ್ನು ತುಂಬಿಸಿಕೊಂಡು ಹೋಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ.
ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ , ಟ್ಯಾಂಕರ್ನಲ್ಲಿದ್ದ ಸುಮಾರು 21,000 ಲೀಟರ್ ತುಪ್ಪದ ಪೈಕಿ ಜನರು ಬಕೆಟ್ ತುಂಬಿಸಿ ಕೊಂಡೊಯ್ದು ಕೊನೆಗೆ ಉಳಿದಿದ್ದು ಕೇವಲ 500 ಲೀಟರ್ ಮಾತ್ರ! ಅಂದರೆ ಸರಿಸುಮಾರು 20,500 ಲೀಟರ್ ತುಪ್ಪ ಅಲ್ಪಸಮಯದಲ್ಲಿ ಜನರ ಮನೆಯ ಕಪಾಟು ಸೇರಿದೆ. ಮತ್ತಷ್ಟು ತುಪ್ಪ ನೆಲಸ ಪಲಾಗಿದೆ.
ಸದ್ಯ ಈ ಘಟನೆಯ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
