ಗೌರಿಬಿದನೂರು: ನಿರ್ಲಕ್ಷ್ಯದಿಂದ ಹಾಳಾಗುತ್ತಿದ್ದ ಕರೇಕಲ್ಲಹಳ್ಳಿ ನರ್ಸರಿ

ಗೌರಿಬಿದನೂರು: ಒಂದು ಕಾಲದಲ್ಲಿ ಸಸ್ಯಕಾಶಿಯಂತೆ ಹಸಿರಿನಿಂದ ಕಂಗೊಳಿಸುತ್ತಿದ್ದ ನಗರದ ಕರೇಕಲ್ಲಹಳ್ಳಿ ತೋಟಗಾರಿಕಾ ಇಲಾಖೆಯ ನರ್ಸರಿ ಈಗ ಅನಾಥವಾಗಿದೆ.
ಕರೇಕಲ್ಲಹಳ್ಳಿ ಬಳಿ ತೋಟಗಾರಿಕಾ ಇಲಾಖೆಗೆ ಸೇರಿದ 35 ಎಕರೆಯಲ್ಲಿ ನರ್ಸರಿ ಇದೆ. ಇಲ್ಲಿನ ಉತ್ತಮ ವಾತಾವರಣ ಮತ್ತು ಗುಣಮಟ್ಟದ ಕೆಂಪು ಮಣ್ಣಿನಿಂದ ಕೂಡಿದ್ದ ಜಾಗದಲ್ಲಿ 300 ಮಾವು, 120 ಸಪೋಟ, 30 ತೆಂಗು, 80 ನೇರಳೆ ಸೇರಿದಂತೆ ಹಲವು ವಿಧದ ಹಣ್ಣಿನ ಮರಗಳು ಇವೆ.
ಆದರೆ ಇಷ್ಟು ಮರಗಳ ನಿರ್ವಹಣೆಗೆ ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮತ್ತು ಎರಡು ಕೊಳವೆ ಬಾವಿಗಳಿವೆ. ಅದರಲ್ಲಿ ಒಂದು ಕೊಳವೆ ಬಾವಿ ಕೆಟ್ಟಿದೆ. ಇದರಿಂದ ಗಿಡಗಳಿಗೆ ಸಕಾಲದಲ್ಲಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಮರಗಳು ಒಣಗಿವೆ.
ಇಲ್ಲಿ ಕೆಲಸ ಮಾಡಲು ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಇರುವುದರಿಂದ ಸಮಯಕ್ಕೆ ಸರಿಯಾಗಿ ಗಿಡ ಮರಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾವುದೇ ರೀತಿಯಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆಯನ್ನೂ ಅಳವಡಿಸಿಲ್ಲ.
ಒಂದು ಕಾಲದಲ್ಲಿ ಇಲ್ಲಿ ತಾಲ್ಲೂಕಿನ ರೈತರಿಗೆ ಬೇಕಾದ ಮಾವು, ಸಪೋಟ, ಹಲಸು ಸೇರಿದಂತೆ ಹಲವಾರು ಬಗೆಯ ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲಾಗುತ್ತಿತ್ತು. ಕಸಿ ಕಟ್ಟಿದ ಗಿಡಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿ ವರ್ಷ ಉತ್ತಮ ಜಾತಿಯ ಹತ್ತು ಸಾವಿರಕ್ಕೂ ಹೆಚ್ಚಿನ ತೆಂಗಿನ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗುತ್ತಿತ್ತು.
ಕಸಿ ಕಟ್ಟುವುದಕ್ಕಾಗಿ ಇಲ್ಲಿನ ಹತ್ತಾರು ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು. ಉತ್ತಮ ಜಾತಿಯ ಮಾವು, ಹಲಸು ಸಪೋಟ ಗಿಡಗಳನ್ನು ಬೆಳೆಸಿ, ಸದಾಕಾಲ ರೈತರ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡುತ್ತಿದ್ದರು. ಇದರಿಂದ ಇಲಾಖೆಗೆ ಉತ್ತಮ ಆದಾಯವೂ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸಿ ಕಟ್ಟಿದ ಗಿಡಗಳನ್ನು ಬೆಳೆಸುವುದನ್ನೇ ನಿಲ್ಲಿಸಲಾಗಿದೆ.
ಇವುಗಳ ಸಂರಕ್ಷಣೆಗೆ ಹಾಕಿದ್ದ ನೆರಳಿನ ಪರದೆ (ಪಾಲಿಹೌಸ್) ಹಾಳಾಗಿದೆ. ಪಾಲಿಹೌಸ್ನಲ್ಲಿ ಗಿಡಗಂಟೆಗಳು ಬೆಳೆದಿವೆ. ಇತ್ತೀಚಿನ ವರ್ಷಗಳಲ್ಲಿ ಬಂದ ಯಾವ ಅಧಿಕಾರಿಯು ತೋಟಗಾರಿಕೆ ಕ್ಷೇತ್ರವನ್ನು ಬೆಳೆಸುವ ಉತ್ಸಾಹ ತೋರುತ್ತಿಲ್ಲ.
ಕೇವಲ ಮಳೆ ಬಂದಾಗ ಮಾತ್ರ ತನ್ನಷ್ಟಕ್ಕೆ ತಾನು ಗಿಡಗಳು ಬೆಳೆದು ನಿಂತಿವೆ. ತೋಟಗಾರಿಕೆ ನರ್ಸರಿಯಲ್ಲಿರಬೇಕಾದ ಯಾವುದೇ ಅಲಂಕಾರಿಕ ಸಸ್ಯ, ಔಷಧೀಯ ಸಸ್ಯ, ಹಣ್ಣಿನ ಗಿಡಗಳನ್ನು ಬೆಳೆಸುವುದನ್ನು ನಿಲ್ಲಿಸಲಾಗಿದೆ. ರೈತರಿಗೆ ಅಗತ್ಯವಾದ ಗಿಡಗಳಾಗಲಿ ಬೆಳೆಸುವುದನ್ನು ನಿಲ್ಲಿಸಲಾಗಿದೆ ಎನ್ನುವುದು ರೈತರ ಅಸಮಾಧಾನದ ನುಡಿ.
ಪ್ರಸ್ತುತ ಮಾವಿನ ಹಣ್ಣುಗಳ ಮಾರಾಟದಿಂದ ಮಾತ್ರ ಪ್ರತಿವರ್ಷ ತೋಟಗಾರಿಕೆ ಇಲಾಖೆಯ ಬೊಕ್ಕಸಕ್ಕೆ ಸ್ವಲ್ಪ ಹಣ ಬರುತ್ತಿದೆ. ಈ ಸಮಯದಲ್ಲಿ ಮಾತ್ರ ಅಲ್ಪ ಸ್ವಲ್ಪ ಮಾವಿನ ಗಿಡಗಳ ನಿರ್ವಹಣೆ ಮಾಡುತ್ತಾರೆ. ಮಾವಿನ ತೋಪನ್ನು ಖರೀದಿಸಿದ ಗುತ್ತಿಗೆದಾರರು ಮಾವಿನ ಹಣ್ಣು ಕಳ್ಳತನವಾಗದಿರಲು ಸುತ್ತಲೂ ಬೇಲಿ ನಿರ್ಮಿಸಿಕೊಳ್ಳುತ್ತಾರೆ.
ಹೀಗೆ ರೈತರಿಗೆ ಅನುಕೂಲವಾಗುತ್ತಿದ್ದ ಮತ್ತು ತೋಟಗಾರಿಕಾ ಇಲಾಖೆಗೆ ಆದಾಯ ತರುತ್ತಿದ್ದ ನರ್ಸರಿಯು ಇಂದು ನಿರ್ವಹಣೆ ಇಲ್ಲದೆ ಹಾಳು ಸುರಿಯುತ್ತಿದೆ. ಅಧಿಕಾರಿಗಳು ಸಹ ನರ್ಸರಿಯ ಪುನರುಜ್ಜೀವನಕ್ಕೂ ಮನಸ್ಸು ಮಾಡುತ್ತಿಲ್ಲ.
ನೀರು ಸಿಬ್ಬಂದಿ ಕೊರತೆ
ಇಲ್ಲಿ ನೀರಿನ ಕೊರತೆ ಮತ್ತು ಸಿಬ್ಬಂದಿ ಕೊರತೆ ಇದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಹಣ ಬಿಡುಗಡೆಯಾದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಿರಣ್ ಸಹಾಯಕ ಕೃಷಿ ನಿರ್ದೇಶಕ ತೋಟಗಾರಿಕೆ ಇಲಾಖೆ ಗೌರಿಬಿದನೂರು ಅಭಿವೃದ್ಧಿಗೆ ಕಾಳಜಿ ಇಲ್ಲ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ನರ್ಸರಿಯನ್ನು ಅಭಿವೃದ್ಧಿ ಮಾಡುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಳೆಗಾಲದಲ್ಲಿ ಮಾತ್ರ ಗಿಡಗಳಿಗೆ ಬೆಂಕಿ ಬೀಳದಿರಲು ಹುಲ್ಲನ್ನು ತೆಗೆಸುತ್ತಾರೆಯೇ ಹೊರತು ರೈತರಿಗೆ ಅನುಕೂಲ ಆಗುವ ಯಾವುದೇ ರೀತಿಯ ಗಿಡಗಳನ್ನು ಇಲ್ಲಿ ಬೆಳೆಸಿಲ್ಲ.