ಗಂಗಾವತಿ :ಪ್ರವಾಸಿಗರ ಮೇಲೆ ಅತ್ಯಾಚಾರ – ಇಬ್ಬರ ಬಂಧನ, ಒಬ್ಬನಿಗಾಗಿ ಶೋಧ

ಬೆಂಗಳೂರು: “ಕೊಪ್ಪಳದಲ್ಲಿ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಪೊಲೀಸರು ಆರೋಪಿಗಳನ್ನು ಮಾರ್ಚ್ 8ರಂದು ಬಂಧಿಸಿದ್ದಾರೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, “ಮಾರ್ಚ್ 6ರಂದು ನಾಲ್ವರು ತುಂಗಾಭದ್ರಾ ನದಿ ಸಮೀಪದ ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ರು. ಇಬ್ಬರು ವಿದೇಶಿಯರು, ಇಬ್ಬರು ಭಾರತೀಯರಿದ್ರು. ಊಟವಾದ ಮೇಲೆ ರಾತ್ರಿ ನಕ್ಷತ್ರ ವೀಕ್ಷಣೆಗೆ ತುಂಗಭದ್ರಾ ಎಡದಂಡೆ ನಾಲೆಯ ಬಳಿ ಹೋಗಿದ್ದಾರೆ. ಗಿಟಾರ್ ಬಾರಿಸಿಕೊಂಡು, ಗಾಯನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಅಲ್ಲಿಗೆ ಬಂದು, ಪೆಟ್ರೋಲ್ ಸಿಗುತ್ತಾ ಅಂತ ಕೇಳಿ ಬಳಿಕ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದರು.
“ಆರೋಪಿಗಳಾದ ಮಲ್ಲೇಶ್ ಮತ್ತು ಚೇತನಾ ಸಾಯಿರಾಮ್ ಎಂಬವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮೂರನೇ ಆರೋಪಿ ಸಿಕ್ಕಿಲ್ಲ. ಶೋಧ ನಡೆಯುತ್ತಿದೆ. ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಓರ್ವ ಪ್ರವಾಸಿಗನ ಮೃತದೇಹ ಸಿಕ್ಕಿದೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆ, ನೆರವು, ಅವರ ದೇಶದ ರಾಯಭಾರ ಕಚೇರಿಗೆ ತಿಳಿಸುವ ಕೆಲಸವಾಗುತ್ತಿದೆ” ಎಂದು ಹೇಳಿದರು.
ಪ್ರವಾಸಿಗರಿಗೆ ಹೆಚ್ಚು ಸುರಕ್ಷತೆ ನೀಡಲು ಕ್ರಮ: “ಈ ದುರಂತ ಆಗಬಾರದಿತ್ತು. ಇಂಥದ್ದೆಲ್ಲಾ ನಡೆದಾಗ ಪ್ರವಾಸಿಗರು ಬರಲು ಹಿಂಜರಿಯುತ್ತಾರೆ. ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆರೋಪಿಗಳಾದ ಮಲ್ಲೇಶ, ಚೇತನ್ ಗಂಗಾವತಿಯವರು. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಿಲ್ಲ. ನಕ್ಷತ್ರ ವೀಕ್ಷಣೆಗೆ ಯಾರಿಗೂ ಹೇಳದೇ ಪ್ರವಾಸಿಗರು ಹೋಗಿದ್ದಾರೆ. ಅದು ನಿರ್ಜನ ಪ್ರದೇಶವಾಗಿತ್ತು” ಎಂದು ತಿಳಿಸಿದರು.